Sunday, July 5, 2015

ಅವನು

ಅವನು, ನನ್ನ ಅತ್ಯಾಪ್ತ ಸಖ, ಹಾಗಾಗಿ ಭಾರತೀಯ ಎಂದು ಹೆಚ್ಚು ಯೋಚಿಸದೇ ನಿರ್ಧರಿಸಬಹುದು. ತನ್ನ ಲೋಕ ನೋಡುವ ಆಸೆಯ ಮೊದಲ ಮೆಟ್ಟಿಲಾಗಿ ತನ್ನ ದೇಶದಾಚೆಯ ದೊಡ್ಡ ಪಟ್ಟಣವೊಂದರಲ್ಲಿ ನೆಲೆಸಿದ್ದ. ಭಾರತೀಯರಿಗೆ ಇರುವ ಸಹಜ ತೊಂದರೆಯಾದ ಊಟೋಪಚಾರ ಭಿನ್ನತೆಯಿಂದಾಗಿ ತಾನು ತನ್ನ ಅಡುಗೆ ಮಾಡಿಕೊಳ್ಳಲೇಬೇಕಾಗಿತ್ತು. ಅದರಿಂದ ಒಳ್ಳೆಯದೇ ಆಗಿತ್ತು ಬಿಡಿ, ದಿನವೂ ಆ ಹಾಸ್ಟೆಲ್ ನ ಅಡುಗೆ ಕೋಣೆಯಲ್ಲಿ ಎಲ್ಲ ದೇಶಭಾಷೆಯ ಜನರೊಂದಿಗೆ ಒಡನಾಟ ದೊರಕಿತ್ತು. ಜಗತ್ತಿನ ಯಾವುದೇ ಭಾಗದಲ್ಲಿ ಒಬ್ಬ ಭಾರತೀಯ ನೆಲೆಸಿದ್ದಾನೆ ಎಂದಾದಲ್ಲಿ ಇತರರಿಗೆ ಆತನ ಭಿನ್ನತೆಯ ಅರಿವು ಅತೀ ಸುಲಭವಾಗಿ ಆಗುತ್ತೆಯಲ್ಲವೇ? ಇದಕ್ಕೆ ಅವನೇನು ಹೊರತಾಗಿರಲಿಲ್ಲ. ಹೀಗೆ ಅಲ್ಲಿನ ನೆರೆಹೊರೆಯವರ ಜೊತೆ ಅವನ ಜೀವನ ಸಾಗಿತ್ತು. ಅವತ್ತೊಂದು ದಿನ, ಅವನ ಕೋಣೆಯಿಂದ ಮೂರ್ನಾಲ್ಕು ಕೊನೆಯಾಚೆಗಿರೋ ಒಬ್ಬನ ಪರಿಚಯವಾಯಿತು. ಪರಸ್ಪರ ವಿಚಾರ ವಿನಿಮಯಗಳು ಶುರುವಾದವು. ಅವನು ಭಾರತದಿಂದ ಬಂದವನು ಎಂದು ತಿಳಿದಾಕ್ಷಣ ಹೊಸದಾಗಿ ಪರಿಚಯವಾದವನು, ನಿಮ್ ದೇಶದಲ್ಲಿ ಬಾಬರ್ ನ ಜನ ಇಷ್ಟಪಡ್ತಾರಾ? ಎಂದು ಪ್ರಶ್ನೆ ಎಸೆದ. ಅವನು ವಿಚಲಿತನಾಗದೇ, ವಾಗ್ವಾದಕ್ಕಿಳಿಯದೆ ನಿಮ್ಮ ದೇಶಕ್ಕೆ ಪಕ್ಕದ ರಾಷ್ಟ್ರದವನು ದಾಳಿಯಿಟ್ಟಲ್ಲಿ ನೀನು ಅವನನ್ನು ಇಷ್ಟ ಪಡುತ್ತೀಯ ಎಂದು ಮರುಪ್ರಶ್ನೆ ಎಸೆದ! ಅಲ್ಲಿಗೆ ಅವನು ಇನ್ನೊಬ್ಬನಿಗೆ ಹೇಳಬೇಕಾದುದ್ದನ್ನು ಹೇಳಿಯಾಗಿತ್ತೆಂದು ನಾನು ಒತ್ತಿ ಹೇಳಬೇಕಿಲ್ಲವಲ್ಲವೇ.

ಹೀಗೆ ದಿನಗಳು ಕಳೆದು ತಿಂಗಳುಗಳೇ ಸರಿದು ಹೋದವು. ಅವನ ಮತ್ತು ಇನ್ನೊಬ್ಬನ  ಸ್ನೇಹ ಸಂಬಂದ ಗಟ್ಟಿಯಾಗುತ್ತಲೇ ಹೋಯಿತು. ಹೀಗೆ ವಿಚಾರ ವಿನಿಮಯಗಳು ನಡೆದವು, ಸಿನಿಮಾದಿಂದ ಹಿಡಿದು ದೈನಂದಿನ ಜೀವನದ ಕುರಿತು ಉಭಯರಲ್ಲಿ ಚರ್ಚೆಗಳಾದವು. ಬಹುಮುಖ್ಯವಾಗಿ ಅಡುಗೆ ಮಾಡುವಾಗ, ಆ ಇನ್ನೊಬ್ಬ ಮುಖ್ಯ ಪ್ರಶ್ನೆಗಳಲ್ಲಿ ಒಂದು ಆ ನನ್ನ ಸಖನೇಕೆ ಸಸ್ಯಹಾರಕ್ಕೆ ಸೀಮಿತವಾಗಿದ್ದಾನೆ ಎನ್ನುವುದು! ಇವನೂ ಭಾರತೀಯರ ಆಹಾರ ಪದ್ಧತಿಯ ಬಗ್ಗೆ ಹೇಳಿದ, ಭಾರತೀಯರಲ್ಲೂ ಮಾಂಸದ ಅಡುಗೆ ಬಳಸುವವರು ಗಣನೀಯ ಪ್ರಮಾಣದಲ್ಲಿ ಇದ್ದಾರೆ ಆದರೆ ಸಸ್ಯಹಾರಿಗಳೂ ಕೂಡ ಕಡಿಮೆ ಏನಿಲ್ಲ ಅಂದ. ಹೀಗೆಯೇ ಚರ್ಚೆ ಮುಂದುವರೆದಿರಬೇಕಾದರೆ ನೆರೆಹೊರೆಯವ ಮಾಂಸಹಾರವನ್ನು ಸಮರ್ಥನೆ ಮಾಡಿಕೊಳ್ಳುತ್ತಾ, ಪ್ರಪಂಚದಲ್ಲಿ ದೇವರು ಸೃಷ್ಟಿ ಮಾಡಿರುವುದೆಲ್ಲ ಮಾನವ ತಿನ್ನುವುದಕ್ಕೆ ಹಾಗಾಗಿ ಮಾಂಸಾಹಾರ ಶ್ರೇಷ್ಠ, ನೀನು ಅದು ಹೇಗೆ ಮಾಂಸವನ್ನು ತಿನ್ನದೇ ಬದುಕಿದ್ದೀಯ ಎಂದ. ಅಷ್ಟರಲ್ಲೇ ಅವನ ಅಡುಗೆ ಮುಗಿದ್ದಿದ್ದರಿಂದ ಮತ್ತೆ ಸಿಗುವ ಎಂದು ವಿದಾಯ ಹೇಳಿ ತನ್ನ ಕೋಣೆಗೆ ಬಂದ.

ಇನ್ನೊಂದು ದಿನ ಏನಾಯಿತು ಅಂದರೆ, ಅದೇ ಆಹಾರ ಪದ್ಧತಿಯ ಬಗ್ಗೆ ಚರ್ಚೆಗಳಾದಾಗ ಅವನು ಭಾರತದಲ್ಲಿ ಅನೇಕ ರೀತಿಯ ದವಸ ಧಾನ್ಯಗಳೂ, ತರಕಾರಿ ಸೊಪ್ಪು-ಸದೆಗಳೂ ದಂಡಿಯಾಗಿ ಸಿಗುವುದರಿಂದ ಮಾಂಸವನ್ನೇ ತಿಂದು ಬದುಕಬೇಕು ಎಂಬ ದರ್ದು ಅನೇಕರಿಗೆ ಇಲ್ಲ, ಹಾಗೆ ನೋಡಿದರೆ ಭಾರತೀಯರು ಮಾಂಸವನ್ನೇ ಮುಖ್ಯ ಆಹಾರವಾಗಿ ಸೇವಿಸುವುದು ಕಡಿಮೆ ಎಂದೂ ಹೇಳಿದ. ಆಗ ಆ ನೆರೆಹೊರೆಯವ ಇವನಿಗೆ ನೀನು ಯಾವತ್ತೂ ಮಾಂಸವನ್ನು ತಿನ್ನಲು ಇಷ್ಟ ಪಡುವುದಿಲ್ಲವೇ ಎಂದೂ, ಅದು ಹ್ಯಾಗೆ ಸಾಧ್ಯ ಎಂದೂ ಆಶ್ಚರ್ಯ ವ್ಯಕ್ತ ಪಡಿಸಿದಾಗ, ಇವನು ನಿನಗೆ ಯಾವ ಪ್ರಾಣಿಯ ಮಾಂಸವಾದರೂ ಸರಿಯೇ ಎಂದು ಮರುಪ್ರಶ್ನೆ ಹಾಕಿದಾಗ ಆತ ಸಾವರಿಸಿಕೊಂಡು ಇಲ್ಲ ಇಲ್ಲ ನಾನು ಹಂದಿಯ ಮಾಂಸವನ್ನು ಮುಟ್ಟುವುದೇ ಇಲ್ಲ ಎಂದ. ಎದುರಾಳಿಯು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದ ಎಂದು ಗೊತ್ತಾಗುತ್ತಿದ್ದಂತೆಯೇ ಅವನು “ಗೊತ್ತಾಯಿತೇ, ನಿನಗೆ ಹ್ಯಾಗೆ ಹಂದಿಯ ಅಥವಾ ಇನ್ಯಾವುದೋ ಪ್ರಾಣಿಯ ಮಾಂಸ ನಿಂಗೆ ಇಷ್ಟವಿಲ್ಲವೋ, ನೀನು ತಿನ್ನುವುದಿಲ್ಲವೋ, ಹಾಗೆಯೇ ನಾನೂ ಮಾಂಸ ತಿನ್ನುವುದನ್ನು ಇಷ್ಟ ಪಡುವುದಿಲ್ಲ ಹಾಗೂ ತಿನ್ನಲೂ ಇಷ್ಟ ಪಡುವುದಿಲ್ಲ”. ಅದು ಅವನಿಗೆ ನಾಟಿತು ಎಂದು ತೋರಿತು. ಹಾಗೆಯೇ ಚರ್ಚೆ ಮುಂದುವರೆಯಿತು, ಭಾರತೀಯರಲ್ಲಿ ಗಣನೀಯರು ಸಸ್ಯಾಹಾರಿಗಳು ಅದೂ ಇದೂ ಎಂಬ ವಿಷಯಗಳ ಮೇಲೆ. ಇಷ್ಟೆಲ್ಲಾ ಆದಮೇಲೆ, ಸಮಯವಾಯಿತೆಂದು ತಮ್ಮತಮ್ಮ ಕೋಣೆಗಳಿಗೆ ಹೋದರು.

ಮರುದಿನ, ಮತ್ತೆ ಇಬ್ಬರ ಭೇಟಿ ಅದೇ ಅಡುಗೆಮನೆಯಲ್ಲಿ. ಇವನು ಅಡುಗೆ ಮಾಡ್ತಾ ಇದ್ದ, ಇದ್ದಕ್ಕಿದ್ದಂತೆ ಭಾರತೀಯರು ಗ್ರೇಟ್ ಅಂದುಬಿಡೋದೇ, ಅವನಿಗೆ ಆಶ್ಚರ್ಯವಾಗಿ ಯಾಕೆ ಅನ್ನಲು “ಸಸ್ಯಹಾರಿಗಳಲ್ಲವ ಅಂದ”. ವಿಚಾರ ಮಾಡಿ ನೋಡಿದಾಗ ನೆರೆಹೊರೆಯವ ಹಿಂದಿನ ದಿನ ನಡೆದ ಚರ್ಚೆಯ ನಂತರ ಕೊನೆಗೆ ಹೋಗಿ ಸ್ವಲ್ಪ ಸಸ್ಯಾಹಾರದ ಬಗ್ಗೆ ಸಂಶೋಧನೆ ನಡೆಸಿದ ವಿಚಾರ ತಿಳಿಯಿತು. ಅವನು ಮುಂದುವರೆದು ಛೆ!! ನನಗೀಗ ಕೋಳಿಗಳ ಬಗ್ಗೆ ಮರುಕ ಹುಟ್ಟುತ್ತಿದೆಯೆಂದ. ಒಂದೇ ದಿನದಲ್ಲಿ ಎಷ್ಟೊಂದು ಬದಲಾವಣೆ? ಇವನಿಗೆ ಅಚ್ಚರಿಯ ಜೊತೆಗೆ ಸ್ವಲ್ಪ ಅಹಂ ಕೂಡ ಹುಟ್ಟಿದ್ದು ಮಾತ್ರ ನಿಜ! 

-*-*-*-*-*-*-*-*-

No comments:

Post a Comment