Tuesday, November 4, 2014

ಬಹುದಿನಗಳ ನಂತರ!

ಛೆ!! ಭರ್ತಿ ಒಂದೂವರೆ ವರ್ಷವೇ ಕಳೆದು ಹೋಯಿತು ನಾನು ನನ್ನ ಮೂಗಿನ ನೇರಕ್ಕೆ ಬರೆದು, ಕೆಲವೊಂದು ಸಲ ನಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡೋದು ಒಳ್ಳೆದೇ. ಅಷ್ಟಕ್ಕೂ ಈ ರೀತಿ ಬರೆಯೋ ಹುಚ್ಚು ನನಗೆ ಅಂಟಿಕೊಂಡಿದ್ದರೂ ಹ್ಯಾಗೆ?  ಯಾಕೆಂದರೆ ನನ್ನ ಮೂಗಿನ ನೇರಕ್ಕೆ ವಿಶ್ಲೇಷಿಸಿದ/ಬರ್ಕೊಂಡ ವಿಚಾರಗಳು ಎಲ್ಲರಿಗೂ ಸರಿ ಬರುತ್ತೆ ಅನ್ನೋದು ಹೇಳೋಕೆ ಆಗೋಲ್ಲ. ಆದರೂ ಇದೊಂದ್ ತರ ಹುಚ್ಚು ನನಗೆ. ಕೆಲವೊಂದು ಹುಚ್ಚುಗಳು ಒಳ್ಳೆಯವೇ. ನಾನು ಅವನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುವುದರ ಮೇಲೆ ನಿರ್ಧಾರಿತವಾಗಿರುತ್ತೆ. ಏನಾದರೂ ಬರೆದೇ ಬಿಡೋಣ ಇವತ್ತು ಅಂತ ಕೂತುಬಿಟ್ಟಿದ್ದೇನೆ ಆದರೆ ಏನ್ ಬರೀಲಿ ಅಂತಾನೆ ಗೊತ್ತಾಗ್ತಾ ಇಲ್ಲ. ನಾನು ಸುಮ್ನೆ ಕಾಲಹರಣ ಮಾಡಿದ್ರೆ ನನ್ನ ಸಮಯವಲ್ಲದೆ ಇದನ್ನು ಓದುವುವರ ಕಾಲವೂ ಹಾಳು.

ಕೆಲವೊಂದು ಸಲ ನಾವು ಎಷ್ಟು ಸಮಯವಿದ್ದರೂ ಸಹ ನಾನು ಬಿಡುವಿಲ್ಲದ ಮನುಷ್ಯ ಎಂದು ತೋರಿಸುಕೊಳ್ಳುವುದರಲ್ಲೇ ನಮಗೆ ಏನೋ ಒಂದು ಅವ್ಯಕ್ತ ಸುಖ. ಯಾರೋ ಒಬ್ಬ ಮಹಾನುಭಾವ ಹೇಳಿದ ನೆನಪು, ಯಾರು ತಮ್ಮ ಎಲ್ಲ ಕೆಲಸಗಳಿಗೂ ಬಿಡುವು ಮಾಡಿಕೊಳ್ಳುತ್ತಾರೋ ಅವರೇ ನಿಜವಾಗಿಯೂ ಬಿಡುವು ಇಲ್ಲದೆ ಇರುವ ಮನುಷ್ಯ. ಕೆಲವೊಂದು ಸಲ ನಮಗೆ ಇಷ್ಟವಾದ ಕೆಲಸವನ್ನು ಏನಾದರೂ ಮಾಡಿ ನೆರವೇರಿಸಿಯೇ ತೀರುತ್ತೇವೆ. ನಮಗೆ ಎಷ್ಟೇ ಹೊಟ್ಟೆ ತುಂಬಿರಬಹುದು ಆದರೆ ನಮ್ಮಿಷ್ಟದ ತಿಂಡಿಯನ್ನು ತಂದಾಗ ಅದನ್ನು ತಿನ್ನದೇ ಇರಲು ಸಾಧ್ಯವೇ, ನಮ್ಮ ಹೊಟ್ಟೆ ಕೇಳದೆ ಇರಬಹುದು ಆದರೆ, ನಮ್ಮ ನಾಲಗೆ ಹಾಗೂ ಕಳ್ಳ ಮನಸ್ಸು ಹ್ಯಾಗಾದರೂ ಮಾಡಿ ಅದನ್ನು ಕಬಳಿಸುವ ಹೊಂಚು ಹಾಕುತ್ತಿರುತ್ತವೆ.

ಈಗ ನಮ್ಮ ದೇಶದಲ್ಲಿ ಇಲ್ಲದೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆಯೇ ಮಾತು. ಒಬ್ಬ ಮಹನೀಯ ಹೇಳಿದ್ದಾರೆ, "be the change that you want see". ನಮ್ಮ ದೇಶ ಸ್ವಚ್ಛವಾಗಿರಬೇಕು ಅಂದರೆ ನಾವು ಮೊದಲು ಸ್ವಚ್ಚವಾಗಿದ್ರೆ ಒಳ್ಳೆದಲ್ಲವೇ. ಕೆಲವೊಬ್ಬ ಪ್ರಗತಿಪರ ಬುದ್ದಿಜೀವಿಗಳ ಪ್ರಕಾರ ಮನಸ್ಸು ಸ್ವಚ್ಚವಾಗಿದ್ರೆ ಸಾಕಂತೆ, ಅದಕ್ಕೆ ಅನಿಸುತ್ತೆ ಈ ಬುದ್ದಿ ಜೀವಿಗಳು ಯಾವಾಗಲೂ ಮಾಸಲಾದ, ಹಳೆಯ, ಕೊಳೆಯಾದ ಬಟ್ಟೆಗಳನ್ನು ಬಳಸುತ್ತಾರೆ. ನೀವು ಏನೇ ಹೇಳಿ, ನಾವು ಬಿಸ್ಕತ್ ತಿನ್ನೋಕೂ ಮೊದಲು ಅದರ ಪ್ಲಾಸ್ಟಿಕ್ ಕವಚ ನೋಡ್ತೀವಿ ತಾನೇ. ಪ್ಲಾಸ್ಟಿಕ್ ಅಲ್ವ ಏನೂ ಆಗೋಲ್ಲ ಅಂತ ಚರಂಡಿಯಲ್ಲಿ ಬಿದ್ದಿರೋ ಬಿಸ್ಕತ್ ಪೊಟ್ಟಣ ಎತ್ತಿಕೊಂಡು ತಿನ್ನೋಕೆ ಆಗುತ್ತಾ? ನಮ್ಮ ಮನಸ್ಸು ಹ್ಯಾಗಿದೆ ಇನ್ನೊಬ್ಬರಿಗೆ ಅನಿಸಬೇಕು ಅಂದ್ರೆ ಮೊದಲು ನಮ್ಮ ಮನಸಿರೋ ಈ ದೇಹ, ಅದು ವಾಸ ಮಾಡ್ತಾ ಇರೋ ಜಾಗ ಚೆನ್ನಾಗಿರಬೇಕಲ್ವ? ಏನೇ ಆಗಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವ ನಮ್ಮ ಮೋದಿಗೆ ಒಂದು ದೊಡ್ಡ ಸಲಾಂ! ಅಲ್ಲ ಆ ಮನುಷ್ಯನಿಗೆ ಈ ಥರ ಯೋಚನೆಗಳು ಹ್ಯಾಗೆ ಬರ್ತವೆ ಅಂತ. ನಾವು ಶುಚಿಯಾಗಿ ಇರಬೇಕು ಅಂತ ಎಲ್ಲರಿಗೂ ಗೊತ್ತು, ಆದರೂ ಅದನ್ನೇ ಒಂದು ಕಾರ್ಯಕ್ರಮ ಅಂತ ಜಾರಿ ಮಾಡಿ, ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸೋ ಕೆಲಸ ಮಾಡ್ತಾ ಇದರಲ್ಲ ಅವ್ರು ಅದಕ್ಕೆ ಮೆಚ್ಚಬೇಕು. ಹಿಂದೊಮ್ಮೆ ನಮ್ಮ ದೇಶದಲ್ಲಿ ಬರಗಾಲ ಪರಿಸ್ಥಿತಿಯೋ, ಯುದ್ದವೋ ಇದ್ದಾಗ ಅಂದಿನ ಪ್ರಧಾನ ಮಂತ್ರಿ ಇದೇ ರೀತಿ ದೇಶವಾಸಿಗಳೇ, ನಮ್ ಹತ್ರ ದವಸ ಧಾನ್ಯ ಕಮ್ಮಿ ಇದೆ ಎಲ್ಲರೂ ಒಂದು ಹೊತ್ತು ಉಪವಾಸ ಇರೋಣ ಎಂದು ಕರೆ ಕೊಟ್ಟಾಗ, ಎಲ್ಲರೂ ಅದೇ ರೀತಿ ಮಾಡಿದ್ರು ಅಂತ ಈಗಿನ ಕಾಲದ ಹುಡುಗರಿಗೆ (ನನ್ನನೂ ಸೇರಿಸಿ) ಹೇಳಿದರೆ ನಕ್ಕು ಸುಮ್ಮನಾಗ್ತಾರಷ್ಟೇ. ರಾಜಕಾರಣಿಗಳ ಬಗ್ಗೆ ಒಂದು ಸಿನಿಕತೆ ಇರುವ ಈ ಕಾಲದಲ್ಲಿ ಆ ತರಹದ ದೃಷ್ಟಾಂತಗಳು ಬರಿ ಕಲ್ಪನೆ ಎಂದು ಭಾಸವಾಗಿರಲೂಬಹುದು. ಆದರೆ ನಮ್ಮ ಜನ ಪ್ರಾಮಾಣಿಕತೆಗೆ ಯಾವತ್ತೂ ಬೆಲೆ ಕೊಡ್ತಾರೆ ಅನ್ನೋದಕ್ಕೆ ನಿದರ್ಶನವೇ ನಮ್ಮ ಪ್ರಧಾನಿ ಮೋದಿ.

ಹೀಗೆ ಬರಿತಾ ಹೋದರೆ ಬರಿತಾನೆ ಇರಬಹುದು. ಆದರೂ, ಬರವಣಿಗೆಗೆ ಒಂದು ಧ್ಯೇಯ ಇದ್ದರಷ್ಟೇ ಅದಕ್ಕೊಂದು ಭೂಷಣ.

ಎಲ್ಲರಿಗೂ ಒಳ್ಳೆದಾಗಲಿ, ಮತ್ತೆ ಸಿಗೋಣ, ಮಾತಾಡಲಿಕ್ಕೆ, ಸಂವಾದಿಸಲ್ಲಿಕ್ಕೆ ಸಿಕ್ಕಾಪಟ್ಟೆ ವಿಷಯ ಇವೆ!!

No comments:

Post a Comment