Saturday, July 30, 2011

ಲೋಕದ ಡೊಂಕ ನೀವೇಕೆ ತಿದ್ದುವಿರಿ

ಸ್ನೇಹಿತರೇ,

ಇವತ್ತು ತಾನೆ ವಿಶ್ವದ ಹಿರಿಯಣ್ಣ ಅಂತ ಅನ್ನಿಸಿಕೊಳ್ಳೋದಿಕ್ಕೇ ಯಾವಾಗಲೂ ಪ್ರಯತ್ನ ಪಡ್ತಾನೆ ಇರೋ ಅಮೆರಿಕದಿಂದ ಒಂದು ಹೇಳಿಕೆ ಹೊರಬಿದ್ದಿದೆ. ಹೇಳಿಕೆ ಕೊಟ್ಟವರು ಇಡೀ ವಿಶ್ವವೇ ಹೆಮ್ಮೆ ಪಟ್ಟಿದ್ದ ಒಬಾಮ!!! ಆಗಿದ್ದು ಇಷ್ಟೇ, ತೈಲ ಬೆಲೆ ಏರಿಕೆಗೆ ಈಗ ಮುಂದುವರೆಯುತ್ತಿರುವ ಚೀನಾ ಹಾಗೂ ಭಾರತ ಕಾರಣವಂತೆ. ಹಿಂದೊಮ್ಮೆ ಯಾರೋ ಇನ್ನೊಬ್ಬ ಮಹಾಶಯ ಜಗತ್ತಿನಲ್ಲಿ ಹೆಚ್ಚುತ್ತಿರುವ ಆಹಾರ ಸಮಸ್ಯೆಗೆ ಈ ಎರಡು ದೇಶಗಳೇ ಕಾರಣ ಎಂದಿದ್ದ. ಈ ಹೇಳಿಕೆಯೂ ಅದರ ಇನ್ನೊಂದು ಮುಖ ಅಷ್ಟೇ. ಅಲ್ಲಾ ಆ ಅಮೆರಿಕದವರೂ ಮನೆಗೆ ಮೂರು ಮೂರು ಕಾರುಗಳನ್ನು ಇಟ್ಟುಕೊಂಡಿರುತ್ತಾರೆ. ಅವರಿಗೆ ಹೆಚ್ಚು ಇಂದನ ಕಬಳಿಸುವ ಎಸ್.ಯು.ವಿ. (ಸ್ಪೋರ್ಟ್ ಯುಟಿಲಿಟಿ ವೆಹಿಕೆಲ್) ಗಳೇ ಬೇಕು. ನಮ್ಮ ಜನ ಎಲ್ಲಿ ಪೆಟ್ರೋಲ್ ಖರ್ಚಾಗಿ ಹೋಗುತ್ತೋ ಅಂತ ಯೋಚಿಸಿ ಮಾಡಿ, ಅಳೆದು ಸುರಿದು ಕೊನೆಗೆ ಬೇರೆ ದಾರಿ ಇಲ್ಲವೆಂದು ತೋರಿದಾಗ ಉಪಯೋಗಿಸುತ್ತಾರೆ. ಮಿತವ್ಯಯದ ಮಂತ್ರ ವನ್ನು ಜಗತ್ತಿಗೆ ಹೇಳಿಕೊಟ್ಟವರೆ ನಾವು. ನಮ್ಮ ಜನ ಅಲ್ಪ ಸ್ವಲ್ಪ ಮಿತವ್ಯಯ ಮಾಡದೆ ಇದ್ದಿದ್ದರೆ, ಮೊನ್ನೆ ಆರ್ಥಿಕ ಹಿಂಜರಿತ ಉಂಟಾದಾಗ ಅಮೆರಿಕ ನಡುಗಿ ಹೋಯ್ತು. ಅದರ ರಾಕ್ಷಸ ದಂತಹ ದೊಡ್ಡ ದೊಡ್ಡ ಸಂಸ್ಥೆ ಗಳೇ ನಲುಗಿ ಹೋದವು. ನಮ್ಮಲ್ಲಿ ಆ ಥರ ಏನೂ ಆಗಲಿಲ್ಲ.

ಈ ಅಮೇರಿಕದವರದ್ದು ಅತಿ ಆಯಿತು. ಬರಿ ಸ್ವಾರ್ಥಿಗಳು. ಬೇರೆಯವರಿಗೆ ಹೇಳುವ ಮೊದಲು ತಮ್ಮದನ್ನು ನೋಡಿಕೊಳ್ಳಲಿ. ಇಂತವರನ್ನು ನೋಡಿಯೇ ನಮ್ಮ ಬಸವಣ್ಣ ೧೨ನೆ ಶತಮಾನದಲ್ಲೇ ಹೇಳಿದರು.
ಲೋಕದ ಡೊಂಕ ನೀವೇಕೆ ತಿದ್ದುವಿರಿ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ

ಸರಿಯಾಗಿ ಹೇಳಿದರಲ್ಲವಾ?

Monday, May 2, 2011

ಅಮೇರಿಕಾ ಹಾಗೂ ಭಾರತ

ನಿನ್ನೆ ಅಮೇರಿಕಾ ಒಂದು ದೊಡ್ಡದಾದ ನಿಟ್ಟುಸಿರು ಬಿಟ್ಟಿತು. ಅದೇ ಸಾಕಿ ಬೆಳೆಸಿದ ಒಸಾಮಾ ಮುಂದೊಂದು ದಿನ ತನಗೇ ತಿರುಗುಬಾಣವಾಗಿ ಬಹು ದೊಡ್ಡ ನಷ್ಟ ಮಾಡುತ್ತಾನೆ ಎಂದು ಕನಸಿನಲ್ಲಿಯೂ ಕೂಡ ಏಣಿಸಿರಲಿಲ್ಲ. ಅದರೂ ಆ ದೇಶ ತೋರಿದ ದಿಟ್ಟ ನಿರ್ಧಾರ ಎಲ್ಲರೂ ಮೆಚ್ಚುವಂತಹದ್ದು . ಹತ್ತು ವರ್ಷದಲ್ಲಿ ಅದು ಸರ್ವ ರೀತಿಯಿಂದಲೂ ತಯಾರಿ ಮಾಡಿ ಕೊನೆಗೂ ಅವನನ್ನು ಬಲಿ ತೆಗೆದುಕೊಂಡೆಬಿಡ್ತು.

ಒಸಾಮಾ ಅಮೇರಿಕಾ ದಾಳಿ ಮಾಡಿದ ಒಂದೇ ತಿಂಗಳಲ್ಲಿ ನಮ್ಮ ಪ್ರಜಾಪ್ರಭುತ್ವ ದ ಸಂಕೇತವಾಗಿರುವ ಸಂಸತ್ ಭವನದ ಮೇಲೆ ದಾಳಿ ನೆಡಿಯಿತು. ಅದೃಷ್ಟವಶಾತ್ ನಮ್ಮ ಧೀರ ರಕ್ಷಣಾ ಸಿಬ್ಬಂದಿಗಳು ತಮ್ಮ ಜೀವವನ್ನೇ ಪಣವಾಗಿಟ್ಟು ಹೆಚ್ಚಿನ ನಷ್ಟವಾಗುವುದನ್ನು ತಪ್ಪಿಸಿದರು. ಅದಾದ ಮೇಲೆ ಆ ದಾಳಿಯ ರೂವಾರಿ ಗಳನ್ನೂ ಬಂದಿಸಿದಾಗ ನಮ್ಮ ದೇಶವಾಸಿಗಳಿಗೆ ಏನೋ ಸಮಾದಾನ ದೊರಕಿತ್ತು. ಆದರೆ ನಮ್ಮ ಕೀಳು ಮಟ್ಟದ ರಾಜಕೀಯ ಎಲ್ಲಿಗೆ ಬಂದು ಮುಟ್ಟಿತೆಂದರೆ, ಅವನಿಗೆ ಕೊಟ್ಟ ಶಿಕ್ಷೆಯನ್ನೂ ಮುಂದೆ ಮುಂದೆ ಹಾಕುತ್ತಲೇ ಬಂದರು. ಇನ್ನೂ ಆ ಪಾಪಿ ಜೀವಂತವಾಗಿದ್ದನೆಂದರೆ ಇದೊಂದು ದುರಂತವಲ್ಲದೆ ಬೇರೇನು? ಥೂ!!!!!

ಅಮೇರಿಕಾ ಶತ್ರುವಿನ ದೇಶಕ್ಕೆ ನುಗ್ಗಿ ಅವನನ್ನು ಸದೆ ಬಡಿಯಿತು ಆದರೆ ನಾವು ಶತ್ರುವನ್ನು ಸೆರೆ ಹಿಡಿದೂ ಅವನನ್ನು ಶಿಕ್ಷಿಸದೆ ಜತನದಿಂದ ಕಾಪಾಡುತ್ತೇವೆ ಅಂದ್ರೆ ಏನು? ಛೆ!! ಎಂತಹ ವೀರ, ಶೂರರು ಆಳಿದ ನಮ್ಮ ನಾಡಿಗೆ ಈ ಗತಿ ಬಂತಲ್ಲ? ಅಯ್ಯೋ! ದೇವರೇ ನಮಗೆ ನೀನೆ ಗತಿ!!

Saturday, April 30, 2011

ಕ್ರಿಕೆಟ್ ಹಾಗೂ ನಮ್ಮ ದೇಶ

ಮೊನ್ನ್ನೆ ಮೊನ್ನೆ ತಾನೇ ನಮ್ಮ ದೇಶದ ಆಟಗಾರರು ಕ್ರಿಕೆಟ್ ವಿಶ್ವ ಪಾರಿತೋಷಕ ಗೆದ್ದರು. ಅದರ ಬೆನ್ನ ಹಿಂದೆ ಶುರುವಾದ ನಮ್ಮ ವಿಜಯೋತ್ಸವ ಇನ್ನೂ ನಿಂತಿಲ್ಲ. ಆಟಗಾರರಿಗೆ ಬಗೆ ಬಗೆಯ ಬಹುಮಾನಗಳನ್ನೂ ಘೋಷಣೆ ಮಾಡಲಾಯಿತು. ನಾಮುಂದು ತಾಮುಂದು ಎಂದು ನಮ್ಮ ದೇಶದ ರಾಜಕಾರಣಿಗಳು, ವಾಣಿಜ್ಯ ಜಗತ್ತಿನ ದಿಗ್ಗಜರು ಕೋಟ್ಯಂತರ ರುಪಾಯಿ ಮೌಲ್ಯದ ಬಹುಮಾನಗಳನ್ನು ಕೊಟ್ಟರು. ನಮ್ಮ ಭೂ ಪುತ್ರ ಯಡಿಯೂರಪ್ಪನವರೂ ಕೂಡ ಎಲ್ಲ ಆಟಗಾರರಿಗೂ ಒಂದೊಂದು ನಿವೇಶನ ಕೊಡುವುದಾಗಿ ಹೇಳಿದಾಗ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ. ಎರಡು ಮೂರು ತಿಂಗಳುಗಳ ಹಿಂದೆಯಷ್ಟೇ ನಮ್ಮ ರಾಜ್ಯದ ಕೆಲವೊಬ್ಬ ಪ್ರತಿಭಾನ್ವಿತ ಕ್ರೀಡಾಪಟುಗಳು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದಾಗಲೂ ಅವರಿಗೆ ಸಿಕ್ಕಿದ್ದು ಬರಿ ಆಶ್ವಾಸನೆಗಳಷ್ಟೇ. ನಮ್ಮ ಜನರಿಗೆ, ಆಳುವ ದೊರೆಗಳಿಗೆ ಕ್ರಿಕೆಟ್ ಬಿಟ್ರೆ ಬೇರೆ ಆಟವೇ ಗೊತ್ತಿಲ್ಲವೇ.

ನಾವು ಕೂಡ ಏನೂ ಸಾಚಗಳಲ್ಲ, ಕ್ರಿಕೆಟ್ ಇದ್ದಾಗ ಕೆಲಸ ಬಿಟ್ಟು ನೋಡುವ ನಾವು ಬೇರೆ ಕ್ರೀಡೆಗಳ ಬಗ್ಗೆ ಯಾವುದೇ ಆಸ್ಥೆ ತೋರಿಸುವುದಿಲ್ಲ.

ಕ್ರಿಕೆಟ್ ಈಗೀಗ ಬರಿ ಕ್ರೀಡೆಯಾಗಿ ಉಳಿದಿಲ್ಲ. ಅದೊಂದು ಹಣ ಮಾಡುವ ದಂದೆ ಯಾಗಿ ಬದಲಾಗಿದೆ. ನೀವೇ ಯೋಚನೆ ಮಾಡಿ, ನಮ್ಮ ಕರ್ನಾಟಕ ದಲ್ಲಿ ಈಗ ಬರಿ ಲೋಡ್ ಶೆಡ್ಡಿಂಗ್ ನದ್ದೇ ರಾಜ್ಯಭಾರ. ಆದರೆ ಕ್ರಿಕೆಟ್ ಹಗಲು-ರಾತ್ರಿ ಪಂದ್ಯಗಳಿಗೆ ಯಾವುದೇ ತೊಂದರೆಯಾಗಲಿಲ್ಲ. ಒಂದೇ ಒಂದು ಹಗಲು-ರಾತ್ರಿ ಪಂದ್ಯ (ಅರ್ಹನಿಶಿ ಪಂದ್ಯ ಅಂತಲೂ ಅನ್ನಬಹುದು) ವನ್ನು ರದ್ದು ಮಾಡಿ ಬರಿ ಹಗಲೇ ಆಡಿದರೆ ಅದೆಷ್ಟು ಮನೆಗಳಿಗೆ ವಿದ್ಯುತ್ ಕೊಡಬಹುದಲ್ಲವೇ? ಮತ್ತೆ ಐ ಪಿ ಎಲ್ ಬೇರೆ ಶುರು ಆಗಿದೆ. ಈ ಪಂದ್ಯಗಲಂತೂ ಬರಿ ರಾತ್ರಿಯಷ್ಟೇ ಆಡಬಲ್ಲ ಪಂದ್ಯಗಳೆನೋ ಅನ್ನುವ ಹಾಗೆ ಮಾರ್ಪಾಡು ಮಾಡಿಬಿಟ್ಟಿದ್ದಾರೆ. ಒಂದು ಅರ್ಥ ಆಗ್ತಾ ಇಲ್ಲ ನನಗೆ, ಹಗಲು-ರಾತ್ರಿ ಪಂದ್ಯಗಳ ಬದಲಿಗೆ ಬೆಳಿಗಿನ ಜಾವ ಐದಕ್ಕೆ ಶುರು ಮಾಡಿದರೆ ದಣಿವು ಆಗುವುದಿಲ್ಲ ಹಾಗು ದೇಹಕ್ಕೂ ಒಳ್ಳೆಯದು. ಈ ರೀತಿ ಮಾಡಿದರೆ ವಿದ್ಯುತ್ ಉಳಿತಾಯವೂ ಆಗುತ್ತೆ. ಪರಿಸರವೂ ಹಾಳಗುವುದಿಲ್ಲ.

ನಮ್ಮ ದೇಶದ ರೈತನ ಬೆಳೆಗಳು ಹಾಳಾಗುತ್ತ ಇವೆ ಕಾರಣ ಮಳೆ ಇಲ್ಲ, ನೀರಾವರಿ ಎಲ್ಲ ಕಡೆಗೂ ಇಲ್ಲ. ಸಾಲ-ಸೋಲ ಮಾಡಿ ಬಾವಿ ಅಥವಾ ಕೊಳವೆ ಬಾವಿ ಬಳಸಿ ನೀರಾವರಿ ಮಾಡಿಕೊಂಡರೆ ನೀರೆತ್ತಲು ವಿದ್ಯುತ್ ಇಲ್ಲ. ಈ ದೇಶದ ಜನಕ್ಕೆ ತಿನ್ನೋ ಅನ್ನಕಿ೦ತಲೂ ಕ್ರಿಕೆಟ್ ಪ್ರೀತಿ ಜಾಸ್ತಿ. ಮೊನ್ನೆ ಮೊನ್ನೆ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ಎಸ್ಸ್ ಎಸ್ಸ್ ಎಲ್ ಸಿ ಪರೀಕ್ಷೆ ಗಳು ಇದ್ದಾಗಲೂ ನಮ್ಮ ಸರ್ಕಾರಗಳಿಗೆ ತಡೆ ರಹಿತ ವಿದ್ಯುತ್ ಕೊಡಲಿಕ್ಕೆ ಆಗಲಿಲ್ಲ. ಆದರೆ ಕ್ರಿಕೆಟ್ ಪಂದ್ಯಗಳು ಮಾತ್ರ ಸಾಂಗವಾಗಿ ನೆರವೇರಿದವು.

ಹೀಗೆ ಆಗುತ್ತಾ ಇದ್ರೆ ಮುಂದಿನ ದಿನಗಳು ಹ್ಯಾಗಿರುತ್ತವೆಯೋ. ಜೇಬಲ್ಲಿ ಸಿಕ್ಕಾಪಟ್ಟೆ ಹಣ ಇರುತ್ತೆ ಆದರೆ ತಿನ್ನೋದಿಕ್ಕೆ ಏನೂ ಸಿಗದೇ ಸಾಯೋ ಪರಿಸ್ತಿತಿ ಬರಬಹುದು. ಕೃಷಿ ಬಗ್ಗೆ ನಾವು ತಳೆದಿರುವ ಧಿವ್ಯ ನಿರ್ಲಕ್ಷ್ಯ ಮುಂದೊಂದು ದಿನ ನಮ್ಮನ್ನು ಸುಡದೆ ಬಿಡಲಾರದು. ನಮ್ಮ ಪರಿಸ್ತಿತಿ ಹ್ಯಾಗೆ ಆಗಿದೆ ಅಂದ್ರೆ ನಾವು ಆರಿಸಿ ಕಳಿಸಿದ ಕೃಷಿ ಮಂತ್ರಿ ಕ್ರಿಕೆಟ್ ಆಡಿಸುತ್ತ ಕಾಲ ಕಳೆಯುತ್ತಾ ಇದ್ರೂ ನಾವು ಏನೂ ಮಾಡಲಾರದ ಸ್ಥಿತಿ ತಲುಪಿಬಿತ್ತಿದ್ದೇವೆ.

Monday, April 11, 2011

ಮಂದ್ರ

ಭೈರಪ್ಪ ವಿರಚಿತ ಮಂದ್ರದಲ್ಲಿರೋ ಪಾತ್ರಗಳು ನನ್ನನ್ನು ತುಂಬಾ ದಿವಸ ಕಾಡಿದವು. ನಾ ಯಾರೇ ಸ೦ಗೀತಗಾರರನ್ನು ನೋಡಲಿ ತಕ್ಷಣ ಮಂದ್ರ ದ ಮೋಹನ ಲಾಲ, ಆ ಹುಚ್ಚು ಹುಡುಗಿಯರು ಜ್ಞಾಪಕಕ್ಕೆ ಬರುತ್ತಾ ಇದ್ದರು. ಮಹಿಳಾ ಹಾಡುಗಾರ್ತಿಯಾರನ್ನು ನೋಡಿದಗಲಂತೂ ಪದೇ ಪದೇ ಮಂದ್ರ ದ ಸನ್ನಿವೇಶಗಳೇ ನನ್ನನ್ನು ಹಿಂಸೆ ಮಾಡಿದವು. ಅದಾದ ಮೇಲೆ ಎಷ್ಟೋ ಸ್ನೇಹಿತರ ಜೊತೆ ಚರ್ಚೆ ಮಾಡಿದೆ, ಆದರೂ ಯಾರೂ ನನಗೆ ಸಮಂಜಸ ಎನಿಸುವಂತಹ ಉತ್ತರವನ್ನು ನೀಡಲಿಲ್ಲ.

ಯಾವುದೇ ಒಂದು ಕಾದಂಬರಿಯಲ್ಲಿ ಒಂದೇ ವಿಷಯದ ಬಗ್ಗೆ ಇಷ್ಟೊಂದು ಒತ್ತಿ ಹೇಳುವ ಅವಶ್ಯಕತೆ ಇದೆಯೇ? ಇನ್ನೊಂದು ವಿಚಾರ ಏನು ಅಂದ್ರೆ, ಯಾವ ಸಂಗೀತಗಾರನೂ ತನ್ನ ಶಿಷ್ಯಗಣಕ್ಕೆ ಯಾವುದೇ ಪ್ರಲೋಭನೆ ಇಲ್ಲದೆ ಸರ್ವವನ್ನು ಧಾರೆ ಎರೆಯಲು ಸಾಧ್ಯವಿಲ್ಲವೇ?

Wednesday, February 9, 2011

ನಮಸ್ಕಾರ ಸ್ನೇಹಿತರೇ,
ಇವತ್ತು ಕೆಲವೊಂದು ಬೇಸರದ ವಿಷಯಗಳನ್ನು ಹೇಳಬೇಕು ಅಂತ ಅನ್ಕೊಂಡಿದಿನಿ.

ಶುಚಿತ್ವದ ಬಗ್ಗೆ ಮಾತನಾಡೋದೇ ದಂಡ ಆದರೂ ಕೆಲವೊಂದನ್ನ ಹೇಳಲೇ ಬೇಕಾಗಿದೆ. ನಮ್ಮ ವಿಭಾಗದ ಕಟ್ಟಡದಲ್ಲಿ ಒಂದು ಶೌಚಾಲಯ ಇದೆ. ಎಲ್ಲ ಸಂಶೋಧನಾ ವಿದ್ಯಾರ್ಥಿಗಳು ಅಲ್ಲೇ ಹೋಗಬೇಕು ಇಲ್ಲ ಅಂದ್ರೆ ಸ್ವಲ್ಪ ದೂರ ಇರೋ ಮುಖ್ಯ ಕಟ್ಟಡಕ್ಕೆ ಹೋಗಬೇಕು. ಈಗ ಹೇಳಲು ಹೊರಟಿರುವುದು ನಮ್ಮ ವಿಭಾಗದ ಕಟ್ಟಡದಲ್ಲಿ ಇರೋ ಶೌಚಾಲಯದ ಬಗ್ಗೆ. ಅಲ್ಲಿಯ ಶುಚಿತ್ವವನ್ನು ನೀವು ನೋಡಿಯೇ ಆನಂದಿಸಬೇಕು. ನೀವು ಅದರ ಬಾಗಿಲನ್ನು ತೆರೆದಕ್ಷಣ ಒಂದು ಆಹ್ಲಾದಕರವಾದ ಪರಿಮಳ ಹೊರಹೊಮ್ಮುತ್ತದೆ!!! ನೀವು ದೈರ್ಯ ಮಾಡಿ ಮುಂದೆ ಹೋದಿರೋ ಅಲ್ಲಿ ಒಂದು ಅಚ್ಚರಿ ಕಾದಿರುತ್ತದೆ, ನೀವು ಅಲ್ಲಿರುವ ಜೇಡರ ಬಲೆಗಳನ್ನು ತಗೆದು ನಂತರ ನಿಮ್ಮ ಕಾರ್ಯ ಮುಂದುವರಿಸಬೇಕಾಗುತ್ತದೆ. ಏನೋ ಹೋಗಲಿ ಸಾವು!! ಅಂತ ಒಂದಿಷ್ಟು ಬೈದು Flush ಮಾಡುವ ಅಂತ ಕೈ ಹಾಕಿದರೆ ನೀರೆ ಬರುವುದಿಲ್ಲ. ಅಲ್ಲಿಯ ಕಮೋಡ್ಗಳು ನೀರನ್ನು ಕಂಡು ಶತಮಾನ ಗಳೇ ಕಳೆದವು. ನಾನು ಇಲ್ಲಿಗೆ ಹೊಸದಾಗಿ ಬಂದ ಹುರುಪಿನಲ್ಲಿ ಹೋಗಿ ನಮ್ಮ ವಾಚ್ ಅಂಡ್ ವಾರ್ಡ್ ಆಫೀಸರ್ ಕಾರಂತ್ ಗೆ ದೂರು ಕೊಟ್ಟರೆ ಅವ್ನು ಅವನದ್ದೇ ಆದ ಸಮಸ್ಯೆಗಳನ್ನ ತೆರೆದಿಟ್ಟ. ಅವನಿಗೆ ಕೆಲಸಗಾರರು ಸಿಗೋದಿಲ್ಲವಂತೆ, ನೀರು ಬರೋದಿಲ್ಲವಂತೆ ಇನ್ನು ಏನೇನೋ. ಅಲ್ಲ ಸ್ವಾಮಿ ಅವನಿರೋದೆ ಇಂತಾದೆಲ್ಲ ಸರಿ ಮಾಡೋದಿಕ್ಕೆ. ನೋಡಿ ನಮ್ಮ ಗ್ರಹಚಾರ. ಹೋಗ್ಲಿ ಸಾಯಲಿ ಅಂತ ಮುಖ್ಯ ಕಟ್ಟಡ ದಲ್ಲಿ ಹೋದಿರೋ ಅಲ್ಲಿಯೂ ಇದೆ ಹಣೆಬರಹ. ಪರವಾಗಿಲ್ಲ ಅನ್ನೋ ಮಟ್ಟಿಗೆ ಶುಚಿಯಾಗಿರೋದು ಬಿಟ್ಟರೆ, ಟಾಪ್ ೧೦ ರಲ್ಲಿರೋ ನಮ್ಮ ವಿದ್ಯಾಲಯದ ಘನತೆಗೆ ತಕ್ಕ ಹಾಗೆ ಇಲ್ಲ. ಆ ಕಟ್ಟಡದಲ್ಲಿ ಒಂದು ಕಡೆ ಇರೋ ಶೌಚಾಲಯ ದಲ್ಲಿ ಅಷ್ಟೇ ನೀರು ಬರೋದು ಇನ್ನೊಂದು ಕಡೆ ಇಲ್ಲ. ಅಲ್ಲ ಟಾಪ್ ೧೦ ಇನ್ಸ್ಟಿಟ್ಯೂಟ್ ದೇ ಈ ಕಥೆ ಇರಬೇಕಾದ್ರೆ ಬೇರೆಯವುಗಳ ಕಥೆ ಏನು?

ಆಮೇಲೆ ನೀವು ಕ್ಯಾಂಪಸ್ ನಲ್ಲಿ ಎಲ್ಲೇ ಹೋಗಿ ನಿಮಗೆ ಪ್ಲಾಸ್ಟಿಕ್ ರಾಶಿ ಸ್ವಾಗತಿಸುತ್ತೆ. ಈ ಹುಡುಗರಿಗೆ socially conscious engineering, green ಇಂಜಿನಿಯರ್, ಇನ್ನೂ ಏನೇನೋ ಹಾಳು-ಮೂಳು ಮಾಡೋಕೆ ಬರುತ್ತೆ ತಮ್ಮ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳಲಿಕ್ಕೆ ಬರೋದಿಲ್ಲ. ಎಲ್ಲ ಶೋ ಆಫ್, ಬಡ್ಡಿ ಮಕ್ಕಳು. ಒಂದ್ ಸಲ ನಮ್ಮ ವಿದ್ಯಾರ್ಥಿ ನಿಲಯ ಕಡೆಯಿಂದ ಇರೋ ಪ್ರವೇಶ ದ್ವಾರದಿಂದ ಒಳಗಡೆ ಬರಬೇಕು ಗೊತ್ತಾಗುತ್ತೆ. ಅಲ್ಲಿ ನಿಮಗೆ ಕಾಣೋದು ಬರಿ ಪ್ಲಾಸ್ಟಿಕ್ ರಾಶಿ, ಸಿಗರೆಟ್ ತುಂಡುಗಳು, ಕಾರ್ಖಾನೆಗಳು ಬಿಡೋ ಹಾಗೆ ಹೊಗೆ ಬಿಡುತ್ತ ನಿಂತಿರ್ತಾರೆ ಬಡ್ಡೆತ್ತವು. ವಿದ್ಯಾಸಂಸ್ಥೆ ಗಳ ಹತ್ತಿರ ಮಾದಕವಸ್ತುಗಳನ್ನು ಮಾರುವುದು ನಿಷೇಧವಿದೆಯದರೂ ಅಲ್ಲಿರೋ ಅಂಗಡಿಯವನು ರಾಜಾರೋಷವಾಗಿ ಮಾರಾಟ ಮಾಡ್ತಾ ಇದಾನೆ. ಇದೆಲ್ಲ ನಮ್ಮ ಮಾನ್ಯ ಮುಖ್ಯ ನಿಲಯಪಾಲಕರ ದಪ್ಪ ಚರ್ಮ ದೊಳಕ್ಕೆ ನಾಟುವುದಿಲ್ಲ. ಇನ್ನು ಅಲ್ಲಿರುವ ಸ್ವಚ್ಚತೆಯ ಬಗ್ಗೆ ಮಾತನಾಡದಿರುವುದೇ ಕ್ಷೇಮ.

ಜೊತೆಗಿರುವ ಚಿತ್ರಗಳನ್ನೂ ಕೂಡ ನೋಡಿ. ಇಲ್ಲಿ ತೋರಿಸಿರುವ ಚಿತ್ರಗಳೆಲ್ಲವೂ ನಮ್ಮ ವಿಭಾಗ ದಲ್ಲಿ ಇರುವ ಶೌಚಾಲಯದವು.



ಪ್ಲಾಸ್ಟಿಕ್ ರಾಶಿ

Thursday, January 6, 2011

ನನ್ನ ಪ್ರೀತಿಯ ಬೈಕೇ.......

ನೆನ್ನೆ ರಾತ್ರಿ ನಿದ್ದೆ ಬರದೆ ಹೋದಾಗ ಗೀಚಿದ ಸಾಲುಗಳಿವು. ನನಗೆ ಗೊತ್ತಾಗದ ಹಾಗೆ ಭರ್ಜರಿ ಆರು ಪುಟಗಳನ್ನ ಹಾಳು ಮಾಡಿಬಿಟ್ಟೆ. ಪ್ರತಿಯೊಂದು ಪುಟವೂ ಚಿತ್ರದ ರೂಪದಲ್ಲಿ ಇದೆ, ಪ್ರತಿಯೊಂದರ ಮೇಲೆ ಕ್ಲಿಕ್ಕಿಸಿ ಆಗ ವೆಬ್ ಪೇಜ್ ನಲ್ಲಿ ತೆರೆಯುತ್ತದೆ, ನಂತರ ನಿಮ್ಮ ಬ್ರೌಸಿಂಗ್ ವಿಂಡೋ ದ ಹಿಗ್ಗುವಿಕೆಯನ್ನು ಸರಿಪಡಿಸಿಕೊಂಡು ನೋಡಿ. ಕಷ್ಟ ಕೊಡುತ್ತಿರುವುದಕ್ಕೆ ಕ್ಷಮೆ ಇರಲಿ..

ಅಂದ ಮೇಲೆ ಮೂರನೇ ಪುಟವು ಎರಡನೇ ಪುಟದ ಕೆಳಗೆ ಬರದೆ ಅದರ ಪಕ್ಕದಲ್ಲಿ ಬಂದಿದೆ ಅದಕ್ಕೂ ಕ್ಷಮಿಸಿ.
















































































ಇಷ್ಟೆಲ್ಲಾ ಬರೆದಾದ ಮೇಲೆ ಸಮಯ ಬೆಳಗಿನ ಜಾವ ಎರಡಾಗಿತ್ತು, ಇನ್ನೂ ತುಂಬಾ ಬರೆಯಲು ಉಳಿದಿತ್ತು ಆದರೆ ಮತ್ತೆ ಏಳಲೇಬೇಕಲ್ಲವಾ ಎಂದು ಯೋಚಿಸಿ ಕಷ್ಟ ಪಟ್ಟು ಮಲಗಿದೆ, ಅದು ಯಾವಾಗ ನಿದ್ದೆ ಬಂತೋ ತಿಳಿಯಲಿಲ್ಲ.

Monday, October 25, 2010

ನಯನ

ಯೆಸ್!!!! ಯೆಸ್!!!!
ಅವಳು ಇವತ್ತು ತುಂಬಾ ಖುಷಿಯಾಗಿದ್ದಳು. ಯಾವತ್ತೂ ಇಲ್ಲದ ನಾಚಿಕೆಯನ್ನು ಅವನಲ್ಲಿ ಕಂಡಿದ್ದಳು. ಇದು ತುಂಬಾ ದಿನದ ಹಿಂದಿನ ವಿಷಯ, ಅವನ ನೋಡಿದ ದಿನದಿಂದಲೇ ಅವನ ಪ್ರೇಮಪಾಶದಲ್ಲಿ ಸಿಲುಕಿದ್ದಳು. ಆದ್ರೆ ಅವನದ್ದು ಸ್ಮಶಾನವೈರಾಗ್ಯ. ಅ೦ಥಹ ರೂಪಸಿ ಬಯಸಿ ಬಂದರೂ ಅವನಲ್ಲಿ ಪ್ರೀತಿಯ ಹೂವು ಅರಳಲಿಲ್ಲ. ಅಂದಿನಿಂದ ಇಂದಿನವರೆಗೂ ಇವಳದ್ದೂ ಒಂದೇ ವರಾತ. ಅವನನ್ನು ಹ್ಯಾಗಾದರೂ ಮಾಡಿ ತನ್ನವನನ್ನಾಗಿ ಮಾಡಿಕೊಳ್ಳಲೆಬೇಕೇ೦ಬುದೇ ಅವಳ ತುಡಿತ. ಅದಕ್ಕಾಗಿ ಅವಳು ಮಾಡದ ಪ್ರಯತ್ನಗಳೇ ಇಲ್ಲ. ಪ್ರತಿ ಬಾರಿಯೂ ಅವಳ ಯಾವ ಪ್ರಯತ್ನವೂ ಅವನಲ್ಲಿ ಕನಿಷ್ಠ ಒ೦ದು ಮುಗುಳ್ನಗೆ ಯನ್ನಾದರೂ ತರಲ್ಲಿಲ್ಲ. ಆದರೆ ಇ೦ದು ಅವಳ ಕಣ್ಣಲಿ ಎ೦ದೂ ಇಲ್ಲದ ಹೊಳಪಿತ್ತು. ಅದಕ್ಕೆ ಕಾರಣ ಬೇರೆ ಇರಲಿಲ್ಲ. ಇ೦ದು ಇವಳು ಕಾಲೇಜಿಗೆ ಬರುವ ಸಮಯದಲ್ಲಿ ಎದುರಿನಲ್ಲೇ ಅವನು ಸಿಕ್ಕಿದ್ದ. ಯಥಾಪ್ರಕಾರ ಅವನನ್ನು ಒಲಿಸಿಕೊಳ್ಳುವ ಪ್ರಯತ್ನ ನಡೆಸಿದ್ದಳು, ಇ೦ದು ಎ೦ದಿನ೦ತಲ್ಲದೆ ಅವನು ಇವಳ ಕಂಡ ಒಡನೇ ತೆಲೇ ಬಗ್ಗಿಸಿಕೊಂಡು ನಾಚಿ ಹೋಗಿಬಿಟ್ಟ. ಇಷ್ಟು ಸಾಕಿತ್ತು ಅವಳ ಕಣ್ಣ ಹೊಳಪಿಗೆ. ಅಚಾನಕ್ ಆದ ಈ ಬೆಳವಣಿಗೆಗೆ ಸ್ಪ೦ದಿಸಲಾರದಷ್ತು ಖುಷಿಯಾಗಿ ಹೋಗಿದ್ದಳು. ಅವನನ್ನು ತಡೆದು ನಿಲ್ಲಿಸಲಾರದೆ ಹೋದಳು.

ಅವಳಿಗೆ ಇ೦ದು ಅವಳ ಪ್ರೇಮದ ಫಲ ಸಿಕ್ಕಿತ್ತು. ಇ೦ದು ಏನಾದರೂ ಆಗಲಿ ಅವನನ್ನು ಕ೦ಡು ಪ್ರೇಮನಿವೇದನೆ ಮಾಡಿ ಕೊಲ್ಲಬೇಕೆಂದು ಹೊರಟಳು. ತನ್ನ ಪುಟ್ಟ ಕನ್ನಡಿಯಲ್ಲಿ ಒಮ್ಮೆ ತನ್ನನ್ನು ತಾನು ನೋಡಿ ಕಾರಣವೆ ಇಲ್ಲದೆ ನಸುನಕ್ಕಳು. ತನ್ನ ಪ್ರಸಾದನ ಸಾಮಗ್ರಿಗಳನ್ನು ತೆಗೆದು ಒಮ್ಮೆ ಮುಖ, ಹುಬ್ಬುಗಳನ್ನು ತೀಡಿದಳು. ಎ೦ದೂ ಇಲ್ಲದ ನಾಚಿಕೆ ಅವಳಲ್ಲಿ ಮನೆ ಮಾಡಿತ್ತು. ಹೋಗಲೋ ಬೇಡವೋ ಎ೦ದು ಅಳೆದು ಸುರಿದೂ ಹೊರಟಳು. ಅಲ್ಲಿ ದೂರದಲ್ಲಿ ತನ್ನ ಸ್ನೇಹಿತರೊಡನೆ ಕೂತಿದ್ದ ಅವನನ್ನು ಹಿಂಬದಿಯಿಂದ ಕ೦ಡಾಗ ಪುಳಕಿತಳಾದಳು. ಇವಳು ಹತ್ತಿರ ಹೋದಂತೆ ಅವನ ಸ್ನೇಹಿತರು ಇಲ್ಲಿಂದ ಜಾಗ ಖಾಲಿ ಮಾಡುವುದೇ ಒಳ್ಳೆಯದೆಂದು ಅವನಿಗೆ ವಿಧಾಯ ಹೇಳಿದರು. ಅವಳು ಮೆಲ್ಲಗೆ ಅವನ ಭುಜದ ಮೇಲೆ ಕೈ ಇತ್ತು ಇಷ್ಟು ದಿವಸ ತಡ ಯಾಕೆ ಮಾಡಿದೆ ಎಂದು, ಕಣ್ಣಲ್ಲಿ ಕಣ್ಣನ್ನು ಇಟ್ಟಾಗ..................................................................

ಮದ್ರಾಸ್ ಐ!!!!!!!!!!!!!!!!!!!!!!!!!!!!!!!!!!!!!!!!!!!!!!!!!