Saturday, May 16, 2015

ಬಾಳೆ ಮಹಾತ್ಮೆ

ಕೆಲವೊಮ್ಮೆ ನಮ್ಮ ಕನ್ನಡ ಭಾಷೆಯ ಬಗ್ಗೆ ಹೇಳುವಾಗ, ಬಾಳೆಹಣ್ಣಿನ ಉಪಮೆ ಬಳಸುವುದನ್ನು ಕೇಳಿದ್ದೆ. ಆದರೆ ಬಾಳೆಹಣ್ಣಿನ ಮಹಾತ್ಮೆ ಈಗೀಗ ಗೊತ್ತಾಗ್ತಾ ಇದೆ. ಏನೇ ಹೇಳಿ ಹಣ್ಣುಗಳಲ್ಲೇ ಬಾಳೆಯೇ ಶ್ರೇಷ್ಠ, ಭಗವಂತನಿಗೂ ಬಾಳೆಹಣ್ಣಿನ ನೈವೇದ್ಯವೇ ಬೇಕು ಅನ್ನುವುದರಲ್ಲೇ ಊಹಿಸಬಹುದು ಅದರ ಮಹಾತ್ಮೆ. ಬಾಳೆಯ ಸವಿಯನ್ನು ಅರಿತವನೇ ಧನ್ಯ ಎಂದು ನನ್ನ ಭಾವನೆ.

ಇದ್ಯಾಕಪ್ಪಾ ಎಲ್ಲಾ ಬಿಟ್ಟು ಬಾಳೆಯ ಬಗ್ಗೆ ಇಷ್ಟೊಂದು ಪ್ರೀತಿ ಹುಟ್ಟಿತು ನನಗೆ ಅಂತ ತಬ್ಬಿಬ್ಬಾಗಬೇಡಿ. ಅನೇಕ ತಿಂಗಳಿನಿಂದ ಅದೆಷ್ಟೋ ಬಗೆಯ ಹಣ್ಣುಗಳನ್ನು ತಂದು ತಿನ್ನುವ ಪ್ರಯತ್ನ ಮಾಡುತ್ತಿದ್ದೆ. ಮಿರಿ ಮಿಂಚುವ ತಹೆರೇವಾರಿ ಸೇಬುಗಳಿಂದ ಹಿಡಿದು, ಕಿತ್ತಳೆ, ದ್ರಾಕ್ಷಿ, ಮೂಸಂಬಿ ಇನ್ನೇನೋ ಹೆಸರೇ ಗೊತ್ತಿರದ ಹಣ್ಣುಗಳನ್ನೂ ಕೊಂಡು ತಂದೆ. ಆದರೆ ಅನೇಕಬಾರಿ ಯಾವ ಹಣ್ಣನ್ನು ಸರಿಯಾಗಿ ಆಸ್ವಾದಿಸಿ ತಿನ್ನಲು ಆಗಲೇ ಇಲ್ಲ. ನನ್ನ ಮೇಜಿನ ಮೇಲೆ ಅವುಗಳು ಹಾಳಾಗುವುದನ್ನು ನೋಡದೆ ಅನೇಕ ಬಾರಿ ತಿನ್ನಬೇಕಾಯಿತು. ಆದರೆ ಈ ಬಾಳೆಹಣ್ಣು ಇದೆಯಲ್ಲ ಅದು ಹಾಗಲ್ಲ, ನಾನು ಎಷ್ಟು ಬೇಡ ಬೇಡ ಅಂದರೂ ನನ್ನ ಬಾಯಿ ಹಾಗೋ ಕೈ ಗಳು ತಮ್ಮ ತಮ್ಮಲ್ಲಿ ಮಸಲತ್ತು ನಡೆಸಿ ಅದ್ಯಾವ ಮಾಯೆಯಲ್ಲೋ ಬಾಳೆಯೊಂದನ್ನು ಗುಳುಂ ಮಾಡಿದ್ದಿದೆ. ಅದೇನೇ ಇರಲಿ ನಿಜವಾಗಿಯೂ ಹಣ್ಣುಗಳ ರಾಜ ಎಂಬ ಪದವಿ ಬಾಳೆಹಣ್ಣಿಗೆ ದಕ್ಕಬೇಕಿತ್ತು. ಆದರೆ ಬಾಳೆ ಬಡವರ ಹಣ್ಣಾಗಿದ್ದರಿಂದ ಇತರೆ ಹಣ್ಣುಗಳು ಅದನ್ನು ತುಳಿದು ಹಾಕಿಬಿಟ್ಟವು ಎಂಬುದು ನನ್ನ ಅಭಿಪ್ರಾಯ. ನೀವೇ ಯೋಚಿಸಿ, ಬಾಳೆಯೊಂದನ್ನು ತಿನ್ನುವುದು ಅದೆಷ್ಟು ಸುಲಭ, ಒಂದೀಡಿ ಹಣ್ಣೊಂದನ್ನು ಚಿಟಿಕೆ ಹೊಡೆಯುವುದರಲ್ಲಿ ತಿಂದು ಮುಗಿಸಬಹುದು. ತಿನ್ನುವಾಗ ಆಗುವ ಆನಂದ ತಿಂದವನಿಗೇ ಗೊತ್ತು, ಆಹಾ ಅದೇನೋ ಸ್ವಾದ. ತಿಂದ ಮೇಲೆ ಅದೇನೋ ಒಂದು ತೃಪ್ತಿ. ಹಣ್ಣನ್ನು ತೊಳೆಯಬೇಕಿಲ್ಲ, ಸಿಪ್ಪೆ ಕಪ್ಪಾಗಿದೆಯಲ್ಲ ಎಂದು ಮರುಗಬೇಕಿಲ್ಲ. ಹೊರಗಡೆ ಹ್ಯಾಗಿದ್ದರೇನು ಒಳಗಿನ ತಿರುಳು ಮಾತ್ರ ಅದ್ಭುತ! ಆದರೆ ಬೇರೆ ಹಣ್ಣುಗಳದ್ದು ಹಾಗಲ್ಲ. ಕೆಲವೊಮ್ಮೆ ನೋಡಲಿಕ್ಕೆ ತುಂಬಾ ಚೆನ್ನಾಗಿರುವ ದ್ರಾಕ್ಷಿ, ಮಾವು ಒಳಗೆ ಹುಳಿಯಾಗಿರುವ ಸಂಭವವೇ ಹೆಚ್ಚು! ಇನ್ನೂ ಕಿತ್ತಳೆ-ಮೂಸಂಬಿಯ ವಿಚಾರ ಜಾಸ್ತಿ ಹೇಳುವ ಅವಶ್ಯಕತೆಯೇ ಇಲ್ಲ. ಆಮೇಲೆ ಹಲಸು, ಯಾರಾದರೂ ತೊಳೆ ತೆಗೆದುಕೊಟ್ಟರೆ ತಿನ್ನಬಹುದು. ಆಮೇಲೆ ಪರಂಗಿ/ಪಪ್ಪಾಯ, ಕರಭೂಜ ತಿನ್ನಲು ವಿಶೇಷ ತಯಾರಿ ಮಾಡ್ಕೊಬೇಕು. ಇಷ್ಟೆಲ್ಲಾ ಗುಣಗಳಿರೋ ಬಾಳೆಹಣ್ಣನ್ನು ಯಾಕೆ ನಾವು ಹಣ್ಣುಗಳ ರಾಜ ಅನ್ನಬಾರದು ಅಂತಾ? ಇನ್ನೊಂದು ಬಹು ಮುಖ್ಯವಾದ್ದು ಮರ್ತೆ ಬಿಟ್ಟೆ, ಬಾಳೆಹಣ್ಣು ಜಾಸ್ತಿ ಹಣ್ಣಾಗಿ ಹೋಗಿಬಿಟ್ಟಿದೆ ಅಂತ ಮರುಗಬೇಕಾಗಿಯೂ ಇಲ್ಲ ಮತ್ತೆ ನೂರಕ್ಕೆ ೯೦ರಷ್ಟು ಬಾರಿ ನಮಗೆ ಭ್ರಮನಿರಸನ ಗೊಳಿಸುವುದಿಲ್ಲ!! ಅಲ್ವೇ??

ಬಾಳೆಹಣ್ಣಿನ ಬಗ್ಗೆ ಇಷ್ಟೆಲ್ಲಾ ಹೆಮ್ಮೆ ಪಟ್ಟ ನನಗೆ ಹಾಗೆ ಒಂದು ಬಾರಿ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಮನಸಾಗಿ, ವಿಕಿಪೀಡಿಯ ತೆರೆದೆ. ಹಾಗೇ ನೋಡುತ್ತಾ ಇರುವಾಗ ಒಂದು ವಿಷಯ ಗಮನಿಸಿದೆ, ಇಡೀ ವಿಶ್ವದ ೧೮ ಪ್ರತಿಶತವನ್ನು ನಮ್ಮ ದೇಶದಲ್ಲಿ ಬೆಳೆಯುತ್ತಾರಂತೆ ಆದರೆ, ನಮ್ಮ ರಪ್ತು ಪ್ರಮಾಣ ನಗಣ್ಯ. ಅದೇ ರೀತಿ, ಜಗತ್ತಿನ ಬರಿಯ ೫ ಪ್ರತಿಶತ ಉತ್ಪಾದನಾ ಪಾಲನ್ನು ಹೊಂದಿರುವ ಇಕ್ವೆಡಾರ್ ರಪ್ತಿನ ವಿಷಯಕ್ಕೆ ಬಂದಾಗ ಮೊದಲ ಸ್ಥಾನದಲ್ಲಿ ಇದೆ. ಅದು ತನ್ನ ಉತ್ಪಾದನೆಯ ೭೦ ಪ್ರತಿಶತವನ್ನು ಇತರೆ ದೇಶಗಳಿಗೆ ರಪ್ತು ಮಾಡುತ್ತದಂತೆ (೨೦೧೨ ರ ದತ್ತಾಂಶ). ಇದರಲ್ಲೇ ಗೊತ್ತಾಗುತ್ತೆ ನಾವು ಕೃಷಿ ಮಾರುಕಟ್ಟೆಯನ್ನು ಅದೆಷ್ಟು ಕಡೆಗಣಿಸಿದ್ದೇವೆ ಎಂದು. ನಮ್ಮ ಭಾರತ ವಿಶ್ವಗುರುವಾಗಬೇಕಾದರೆ ಕೃಷಿ ಮಾರುಕಟ್ಟೆಯೊಂದೇ ಸಾಕು. ನಾವು ಏನೇನು ಬೆಳೆಯೋಲ್ಲ! ನಮಗೆ ನಮ್ಮ ಸಾಮರ್ಥ್ಯ ತಿಳಿದಿಲ್ಲ. ವಿಶ್ವದ ಅನೇಕ ರಾಷ್ಟ್ರಗಳು, ಮಾನವ ಸಂಪನ್ಮೂಲ ಇಲ್ಲವೇ ಕೃಷಿಗೆ ಯೋಗ್ಯ ವಾತಾವರಣ ಇಲ್ಲದೆ ಪರಿತಪಿಸುತ್ತಾ ಇರುವಾಗ ಈ ಎರಡು ವಿಪುಲವಾಗಿ ಇರುವ ನಾವು ಬಹುಮುಖ್ಯ ಕ್ಷೇತ್ರವೊಂದನ್ನು ಕಡೆಗಣಿಸಿದ್ದೆವೆಯೇ???

Tuesday, January 20, 2015

ಕೆಲವೊಂದು ಮಾಧ್ಯಮ ಮಿತ್ರರ ದುರ್ಬುದ್ಧಿ!

ಈ ವಿಷಯಾನ ತುಂಬಾ ಹಿಂದೇನೆ ಹೇಳಬೇಕು ಅಂದುಕೊಂಡಿದ್ದೆ, ಆದರೆ ಅದು ಹ್ಯಾಗೋ ಮರತೇ ಹೋಗ್ತಾ ಇತ್ತು. ಇವತ್ತು ಅದನ್ನ ನಿಮ್ಮ ಮುಂದೆ ಇಡುತ್ತಾ ಇದೀನಿ. ಮೊನ್ನೆ ಅಂದ್ರೆ, ಕಳೆದ ತಿಂಗಳು ರಶಿಯಾದ ಅಧ್ಯಕ್ಷ ವ್ಲಾಡಿಮಿರ್ ವ್ಲಾಡಿಮಿರ್ವಿಚ್ ಪುಟಿನ್ ನಮ್ಮ ದೇಶಕ್ಕೆ ಬಂದಿದ್ದರಲ್ಲ, ಆಗ ವೃತ್ತಪತ್ರಿಕೆಗಳಲ್ಲಿ, ಜಾಲತಾಣಗಳಲ್ಲಿ ಬಂದಿದ್ದಿರಬಹುದಾದ ವಿಷಯಗಳ ಬಗ್ಗೆ ನೋಡ್ತಾ ಇದ್ದೆ, ಆಗ ರೇಡಿಯೋ ಸ್ಪುಟ್ನಿಕ್ (ಸ್ಪುಟ್ನಿಕ್ –ಪ್ರಪಂಚದ ಮೊದಲ ಮಾನವನಿರ್ಮಿತ ಉಪಗ್ರಹ) ಅನ್ನೋ ಒಂದು ಆನ್ಲೈನ್ ರೇಡಿಯೋದಲ್ಲಿ ನಡೆಸಿದ್ದ ಸಂವಾದದ ಮೇಲೆ ನನ್ನ ಗಮನಹರಿಯಿತು. ಸಂವಾದ, ಭಾರತದಲ್ಲಿರುವ ರಶಿಯನ್ ರಾಯಭಾರಿ, ಮಾಸ್ಕೋ ಸ್ಟೇಟ್ ವಿವಿಯ ಒಬ್ಬ ಸಹ ಪ್ರಾಧ್ಯಾಪಕ (ರಶಿಯಾದ ಅಂತರರಾಷ್ಟ್ರೀಯ ಸಂಬಂದಗಳ ವಿಭಾಗ) ಹಾಗೂ ಇನ್ನಿತರೇ ಪ್ರಮುಖ ವ್ಯಕ್ತಿಗಳ ನಡುವೆ ನಡೆಯುತ್ತ ಇತ್ತು. ಅದರಲ್ಲಿ ಭಾರತದ CNN-IBN ಗೆ ಸೇರಿದ ಒಬ್ಬ ಪತ್ರಕರ್ತೆಯೂ ಭಾಗವಹಿಸಿದ್ದರು. ಹೀಗೆ ಒಂದು ಅಧ್ಯಕ್ಷ ಪುಟಿನ್ ಹಾಗೂ PM ಮೋದಿಯವರ ನಡುವೆ ವೈಯಕ್ತಿಕ/ಅನೌಪಚಾರಿಕ ಬಾಂಧ್ಯವ್ಯದ ಬಗೆಗಿನ ಪ್ರಶ್ನೆಗೆ ಉತ್ತರಿಸುತ್ತಾ ಆವಮ್ಮ, 
ಧ್ಯಕ್ಷ ಪುಟಿನ್ ಅವರನ್ನು ಭಾರತದಲ್ಲಿ ರಶಿಯಾದ ಒಬ್ಬ ಬಲಿಷ್ಠ ಅಧ್ಯಕ್ಷರನ್ನಾಗಿ ನೋಡ್ತಾರೆ, ಆದರೆ ಸ್ವಲ್ಪ ಮಂದಿ ಅವರನ್ನು ವಿವಾದಾತ್ಮಕ ರಾಜಕಾರಣಿ ಅನ್ನೋದನ್ನು ಒಪ್ಪಿಕೊಳ್ತಾರೆ, ನಮ್ಮ ಪ್ರಧಾನಿಯವರ ಬಗ್ಗೆಯೂ ಈ ತರಹದ ಅಭಿಪ್ರಾಯಗಳು ಇವೆ ಅದೂ ಇದೂ ಅಂತ ಶುರು ಮಾಡೇಬಿಡೋದಾ? 
ಅಲ್ಲಾ, ಉಧ್ಘೋಶಕಿ ಕೇಳಿದ ಪ್ರಶ್ನೆ ಏನು ಈಯಮ್ಮ ಅಲ್ಲಿ ಏನನ್ನು ತೂರಿಸೋಕೆ ಪ್ರಯತ್ನ ಮಾಡ್ತಾ ಇದ್ರು? ಅದೇನೋ ಅಂತಾರಲ್ಲ ಹುಟ್ಟು (ಕಲಿತ!!?) ಬುದ್ದಿ ಸುಟ್ಟರೂ ಹೋಗಲ್ಲ ಅನ್ನೋ ತರಾ ಆಯಿತು ಇದು. ಅದರೂ ಸಂವಾದ ಮಂಡಳಿಯಲ್ಲಿ ಮಾಧ್ಯಮದ ಬೇರೆ ಮಂದಿ ಇದ್ದರೂ ಅವರ್ಯಾರೂ ಈ ತರಹ ವಿಷಯಾಂತರಕ್ಕೆ ಯತ್ನಿಸಲಿಲ್ಲ. ಹಿಂದೊಮ್ಮೆ NDTV ಚಾನೆಲ್ ನಲ್ಲಿ ಇದೇ ರೀತಿ ಮೊಂಡುವಾದ ಮಾಡಿದ್ದಾಗ ಪಾಪ ಬ್ರಿಟನ್ ಚುನಾಯಿತ ಪ್ರತಿನಿಧಿ ತಬ್ಬಿಬ್ಬಾಗಿ ಹೋಗಿದ್ದ!!! (ಆಮೇಲೆ ಸರಿಯಾಗಿ ಜಾಡಿಸಿದ ಬಿಡಿ, ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ತರ ಆ ವಾರ್ತಾವಾಚಕಿ ತನ್ನ ವಾದವನ್ನು ಬಿಡಲೇ ಇಲ್ಲ!!!!)

ಇದೆಲ್ಲಾ ನೋಡಿದ್ರೆ ನಮ್ಮ ದೇಶದ ಬಗ್ಗೆ ಹೊರದೇಶಗಳಲ್ಲಿ (ಕೆಲವೊಂದು) ಕೆಟ್ಟ ಭಾವನೆ ಇರೋದಕ್ಕೆ ಈ ರೀತಿಯ ವ್ಯಕ್ತಿಗಳೇ ಕಾರಣ ಅಲ್ವಾ!?

ಧ್ವನಿ ಮುದ್ರಿಕೆ ಇಲ್ಲಿ ಕೇಳಿ: http://sputniknews.com/popup/radio/1015799895/?audio_id=1015800402
ಸಂವಾದದ ಪೂರ್ಣಪಾಠಕ್ಕಾಗಿ: http://sputniknews.com/radio_red_line/20141213/1015799895.html

Wednesday, December 24, 2014

ನಮ್ಮ ಸರ್ಕಾರಿ ಸಂಶೋಧನಾ ಸಂಸ್ಥೆಗಳು!!

ಇವತ್ತು ಒಂದು ಸಂಪಾದಕೀಯ ಓದಿದೆ (http://epapervijayavani.in/Details.aspx?id=17975&boxid=1499986) ವಿಜಯವಾಣಿಯಲ್ಲಿ, ನಮ್ಮ ಸೇನೆಯ ಸ್ಥಿತಿ ನಿಜವಾಗಿಯೂ ದುರದೃಷ್ಟಕರ. ಇದರ ಬಗ್ಗೆ ನಮ್ಮ ಸರ್ಕಾರ ಗಮನಹರಿಸಲೇ ಬೇಕು. ಸಂಸತ್ತಿನ ಸ್ಥಾಯಿ ಸಮಿತಿ ಹೇಳಿದ ಹಾಗೆಯೇ, ನಮ್ಮಲ್ಲಿ ಇರುವ ರಕ್ಷಣಾ ಸಂಶೋಧನಾ ಸಂಸ್ಥೆಗಳು ನಿಜವಾಗಿಯೂ ಬಿಳಿಯಾನೆಗಳಾಗಿವೆ. ಅಲ್ಲಿರೋರಲ್ಲಿ ಮಾಡ್ತಾ ಇರೋದು ಏನು? ನಿಜವಾಗಿಯೂ ಬೇಸರ ಆಗುತ್ತೆ, ಸಾಮರ್ಥ್ಯ ಇಲ್ಲದವರು ಇವತ್ತು ಈ ಥರ ಇರೋ ಸಂಶೋಧನಾ ಸಂಸ್ಥೆಗಳಲ್ಲಿ ತುಂಬಿ ತುಳುಕುತ್ತಾ ಇರೋದಿಕ್ಕೆ ಇವತ್ತು ನಮ್ಮ ದೇಶದ ಕೆಲವೊಂದು ವಿಭಾಗಗಳು ರೋಗಗ್ರಸ್ಥವಾಗಿರೋದು. ಈ ಸಂಶೋಧನ ವಲಯ ಒಂದು ದೊಡ್ಡ ರಾಜಕೀಯ, ಅಲ್ಲಿ ಒಂದು ತಾತ್ಕಾಲಿಕ ಕೆಲಸ ಸಿಗೊದಕ್ಕೂ ನಿಮಗೆ ಯಾರದ್ದೋ ದೊಡ್ಡ ತೆಲೆಯ ಶಿಫಾರಸ್ಸು ಬೇಕಾಗಿದೆ. ಕೆಲವೊಂದು ಸಲ ಈ ವಿಜ್ಞಾನಿಗಳು ರಾಜಕಾರಣಿಗಳನ್ನು ಟೀಕಿಸುವುದುಂಟು, ಆದರೆ ಕೆಲವೊಂದು ವಿಜ್ಞಾನಿಗಳು ಈ ರಾಜಕಾರಣಿಗಳಿಗಿಂತ ನಾಲಾಯಕ್ ಆಗಿರುತ್ತಾರೆ. ಇವತ್ತಿನ ದಿನ ಈ ಶಿಫಾರಸ್ಸು ಪತ್ರ ಅನ್ನೋ ಒಂದು ವಿಷಯ ಹಿಡಿದುಕೊಂಡು ಎಷ್ಟು ಜನ ಅಮಾಯಕರ ಜೀವನ ಹಾಳು ಮಾಡಿಲ್ಲ? ತಮ್ಮ ಕೆಲವು ನಾಲಾಯಕ್ ವಿದ್ಯಾರ್ಥಿಗಳಿಗೆ ಒಳ್ಳೆಯ ಆಯಕಟ್ಟಿನ ಜಾಗ ಕೊಟ್ಟಿಲ್ಲ. ಇಂತಹ ಕೆಲವೊಂದು ಜನರಿಂದ ಬೇಸತ್ತ ನಮ್ಮ ಪ್ರತಿಭಾನ್ವಿತ ಜನ ವಿದೇಶಗಳಲ್ಲೇ ಇರೋ ಯೋಚನೆ ಮಾಡಿಬಿಡ್ತಾರೆ. ನಿಮಗೆ ನಮ್ಮ ಭಾರತದಲ್ಲಿ ಒಳ್ಳೆ ಕೆಲಸ (ವಿಜ್ಞಾನಿ, ಪ್ರಾಧ್ಯಾಪಕ ಇತ್ಯಾದಿ) ಸಿಗಬೇಕಂದ್ರೆ ನೀವು ಪ್ರತಿಭಾನ್ವಿತರಲ್ಲದೇ ಇದ್ರೂ ನಡೆಯುತ್ತೆ ಒಂದು ದೊಡ್ಡ ವಿಶ್ವವಿದ್ಯಾಲಯದ ಹೆಸರು, ದೊಡ್ಡ ಮನುಷ್ಯನ (ಪ್ರೊಫೆಸರ್ಗಳು) ಕೃಪಾಕಟಾಕ್ಷ ಇರಲೇ ಬೇಕು. ಇಲ್ಲ ಅಂದ್ರೆ ನಿಮ್ಮನ್ನ ಮೂಸಿಯೂ ನೋಡೋಲ್ಲ.

ಇನ್ನೂ, DRDO ವಿಷಯಕ್ಕೆ ಬರೋಣ, ನಮ್ಮ ದೇಶದಲ್ಲಿ ಹಲವಾರು DRDO ಸಂಬಂದಪಟ್ಟ ಪ್ರಯೋಗಾಲಯಗಳಿವೆ. ಕೆಲವೊಂದು ತುಂಬಾ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಇವೆ, ಆದರೆ ಕೆಲವೊಂದರಲ್ಲಿ ಅದೇನು ಮಾಡ್ತಾರೋ ಮಹಾನುಭಾವರು ಗೊತ್ತೇ ಆಗೋಲ್ಲ. ಯಾರನ್ನೂ ತಮ್ಮ ಹತ್ರಕ್ಕೆ ಬಿಟ್ಟುಕೊಳ್ಳುವುದಿಲ್ಲ, ಸಾರ್ವಜನಿಕರಿಗಂತೂ ಪ್ರವೇಶ ಕೊಡುವ ಮಾತೇ ಇಲ್ಲ ಬಿಡಿ.

ನನ್ನ ಸ್ನೇಹಿತನೊಬ್ಬ ಹೇಳಿದ ಸಂಗತಿ ಇದು. ಅವನ ಸ್ನೇಹಿತನೊಬ್ಬ ಒಂದು ಸಂಶೋಧನಾ ಸಂಸ್ಥೆಯಲ್ಲಿ ಕಿರಿಯ ವಿಜ್ಞಾನಿಯಾಗಿ ಸೇರಿಕೊಂಡಿದ್ದ. ಹೀಗೆ ಇಬ್ಬರೂ ಒಂದು ಸಲ ಮಾತಿಗೆ ಸಿಕ್ಕಾಗ, ಲೋಕಾರೂಡಿಯಂತೆ ನನ್ನ ಸ್ನೇಹಿತ ಅವನನ್ನು ಕೆಲಸದ ಬಗ್ಗೆ ಕೇಳಿದ್ದಾನೆ. ಆಗ ಅವನು, ಏನೂ ಮಾಡ್ತಾ ಇಲ್ಲ ಕಣೋ, ಬರ್ತೀನಿ, ನಂಗೆ ಕೂರಲಿಕ್ಕೆ ಸರಿಯಾದ ಕಚೇರಿಯೂ ಇಲ್ಲ, ಅಲ್ಲಿ-ಇಲ್ಲಿ ಓಡಾಡ್ತೀನಿ, ೫-೬ ಸಲ ಕಾಫಿ, ಮಧ್ಯಾನದ ಊಟ ಹೀಗೆ ಕಾಲ ಕಳೆಯುತ್ತೆ, ವಾಪಾಸ್ ಬರ್ತೀನಿ ಅಂತ ಅಂದನಂತೆ. ಇಲ್ಲಿ ಅವನ ತಪ್ಪೂ ಇದೆ, ಆದರೆ ಅವನೊಬ್ಬ ಕಿರಿಯ ವಿಜ್ಞಾನಿ, ತನ್ನ ಹಿರಿಯರು ಏನು ಮಾಡ್ತಾರೋ ಅದನ್ನೇ ಮಾಡ್ತಾನೆ ಅಷ್ಟೇ. ನಮ್ಮಲ್ಲಿ ಕಿರಿಯರನ್ನು ತಿದ್ದಿ ಮುನ್ನೆಡೆಸುವವರು ಕಡಿಮೆ. ನಾನು ಯಾಕೆ ಹೇಳಿಕೊಡಬೇಕು, ನನಗೇನು ಲಾಭ ಅದರಿಂದ ಅನ್ನೋದೇ ಜಾಸ್ತಿ. ಅವನೇ ಇನ್ನೊಂದು ವಿಷ್ಯ ಹೇಳಿದನಂತೆ, ಇಲ್ಲಿ ಒಂದು ಉಪಕರಣ ಇದೆ ಕಣೋ, ಅದು ಕೆಲಸಮಾಡಲಿಕ್ಕೆ ತಯಾರಿಯಾಗಬೇಕು (like to warm up, to reach required operating parameters etc) ಅಂದ್ರೆ ೪-೫ ಗಂಟೆ ಆಗುತ್ತೆ. ದಿನ ಒಬ್ಬರು ಬಂದು ಒಂದು ಹತ್ತು ಗಂಟೆ ಸುಮಾರಿಗೆ ಅದನ್ನ ಚಾಲೂ ಮಾಡ್ತಾರೆ. ೩-೪ ಗಂಟೆ ಅಷ್ಟೊತ್ತಿಗೆ ಎಲ್ಲ ಸರಿಯಾಗಿ ಬೇಕಾಗಿರೋ ಪ್ರಯೋಗವೋ ಇನ್ನೊಂದೋ ಮಾಡಲಿಕ್ಕೆ ತಯಾರಾಗುತ್ತೆ. ಆದರೆ ಇನ್ನೇನು ೪ ಗಂಟೆ ಆಗಿರುತ್ತೆ, ಅದಕ್ಕೆ ಇನ್ನೊಂದು ಗಂಟೇಲಿ ಏನ್ ಮಾಡೋಕೆ ಆಗುತ್ತೆ ಅಂತ ಯೋಚಿಸಿ ಅದನ್ನ ಬಂದ್ ಮಾಡಿ ಹೋಗ್ತಾರೆ. ಇದು ನಿಜವೋ ಸುಮ್ನೆ ಆಡಿಕೊಳ್ಳಲು ಹೇಳಿದ್ದೋ ಗೊತ್ತಿಲ್ಲ. ಆದರೆ ನಮ್ಮ ಸರ್ಕಾರಿ ಕೆಲಸಗಾರರ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ!!   

Saturday, December 20, 2014

ಶಿಕ್ಷಣ ಮಾಧ್ಯಮದ ವಿಚಾರ!

ಕನ್ನಡ ಮಾಧ್ಯಮದಲ್ಲಿ ಓದಬೇಕು ಸರಿ. ಆದರೆ ಅದಕ್ಕೆ ಸರಿಯಾದ ವ್ಯವಸ್ಥೆ ಇದೆಯಾ ನಮ್ಮಲ್ಲಿ ಅನ್ನೋದು ಮೊದಲು ಯೋಚಿಸಬೇಕಾಗಿದೆ! ಸರಿ ಸರ್ಕಾರ ನಾಳೆಯಿಂದಲೇ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ಅಂತ ಒಂದು ಆದೇಶ ಹೊರಡಿಸುತ್ತೆ ಅಂತ ಇಟ್ಕೊಳ್ಳಿ. ಅದಕ್ಕೆ ತಕ್ಕಹಾಗೆ ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇದೆಯಾ ನಮ್ಮಲ್ಲಿ, ಕನ್ನಡದಲ್ಲಿ ಸರಿಯಾಗಿ ಪಾಠ ಮಾಡೋ ಶಿಕ್ಷಕರು ಇದಾರ ನಮ್ಮಲ್ಲಿ? ವಿಜ್ಞಾನ ವಿಷಯಗಳ ಬಗ್ಗೆ ಕನ್ನಡದಲ್ಲಿ ಆಕರ ಗ್ರಂಥಗಳು ಇವೆಯೇ? ಕನ್ನಡ ಮಾಧ್ಯಮದಲ್ಲಿ ಓದೋದು ಅಂದ್ರೆ ಬರೀ ಸಾಹಿತ್ಯವನ್ನೇ ಕಲಿಯೋದು ಅಲ್ಲ ತಾನೇ? ನಿಜವಾಗಿಯೂ ನಮ್ಮ ಪರಿಸ್ಥಿತಿ ನೋಡಿ ಬೇಸರ ಆಗುತ್ತೆ. ಪಕ್ಕದ ಆಂದ್ರದಲ್ಲಿ  ಪ್ರಥಮದರ್ಜೆ ಕಾಲೇಜಿನಲ್ಲೂ ತೆಲುಗು ಮಾಧ್ಯಮದಲ್ಲೇ ವಿಜ್ಞಾನವನ್ನು ಕಲಿಸಿಕೊಡ್ತಾ ಇದಾರೆ. ನಮ್ಮಲ್ಲಿ ನಾವು ಪಿಯುಸಿಯನ್ನೂ ಸಹ ಆಂಗ್ಲದಲ್ಲೇ ಕಲೀಬೇಕಾಗಿದೆ (ವಿಜ್ಞಾನ ವಿಭಾಗ).

ನಿಜವಾಗಿಯೂ ನಾವು ಮಾಡುತ್ತಿರುವುದು ಸರಿಯೇ? ನಮ್ಮ ಭಾಷೆಯನ್ನು ಬಳಸದೇ ಆಂಗ್ಲ ಭಾಷೆಗೆ ಒಗ್ಗಿಕೊಂಡಿರುವ ಫಲ ಏನು? ನನ್ನ ಪ್ರಕಾರ ಇದರಿಂದ ನಮ್ಮ ದೇಶಕ್ಕೆ ಆದ ಉಪಯೋಗ ತೀರ ಕಮ್ಮಿ. ನಮ್ಮ ಶಿಕ್ಷಣ ಮಾಧ್ಯಮದ ಫಲವಾಗಿ ಇಂದು ನಮ್ಮ ಪ್ರತಿಭಾನ್ವಿತ ಜನ ಬೇರೆ ದೇಶಕ್ಕೆ, ಅದರ ಒಳಿತಿಗೆ  ದುಡೀತಾ ಇದಾರೆ ಅಷ್ಟೇ. ಐ ಟಿ ಕೂಲಿಗಳ ಸೃಷ್ಟಿಯಾಗ್ತಾ ಇದೆ ಅಷ್ಟೇ. ನಿಜವಾಗಿಯೂ ನಾವು ಮುಂದುವರೆಯುತ್ತಾ ಇದೀವಾ? ಮುಂದುವರೆಯಲಿಕ್ಕೆ, ಅಭಿವೃದ್ಧಿಹೊಂದಲಿಕ್ಕೆ ಆಂಗ್ಲ ಮಾಧ್ಯಮವೇ ಬೇಕಾ? ಹಾಗೆ ನೋಡೋದಾದರೆ, ಬಹುತೇಕ ಯುರೋಪಿಯನ್ ರಾಷ್ಟ್ರಗಳಲ್ಲಿ, ಅವರ ಮಾತೃಭಾಷೆಯೇ ಶಿಕ್ಷಣ ಮಾಧ್ಯಮ. ಆದರೆ ಅಲ್ಲಿನ ಜನಜೀವನ ಮಟ್ಟ ಉನ್ನತವಾಗಿಲ್ಲವೇ? ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಿಲ್ಲವೇ? ನೀವು ನಂಬ್ತೀರೋ ಬಿಡ್ತೀರೋ, ಬಹುತೇಕ ಯುರೋಪಿಯನ್ ಪ್ರಜೆಗಳು ಒಂದೇ ಒಂದು ಆಂಗ್ಲ ಪದದ ಅರ್ಥವನ್ನು ಹೇಳಲು ಶಕ್ಯರಲ್ಲ. ಜನಸಾಮಾನ್ಯರನ್ನು ಒಂದೆಡೆ ಸರಿಸಿ, ಕಾಲೇಜು ಪ್ರಾದ್ಯಾಪಕರು, ವೈದ್ಯರು ಹಾಗೂ ಇನ್ನಿತರೇ ಉನ್ನತ ವ್ಯಾಸಂಗ ಮಾಡಿರೋ ಜನರೂ ಸಹ ಆಂಗ್ಲ ಭಾಷೆಯಲ್ಲಿ ಮಾತನಾಡಲಾರರು. ಇದರರ್ಥ ಅವರಿಗೆ ಏನು ತಿಳಿದಿಲ್ಲ ಎಂದಲ್ಲ. ನಮಗಿಂತ ಸಾವಿರ ಪಾಲು ಹೆಚ್ಚಿನ ಜ್ಞಾನ ಅವರಿಗಿದೆ. ಭಾರತವೊಂದೆ ಅನಿಸುತ್ತೆ ವಸಾಹತುಶಾಯಿ ಪಳೆಯುಳಿಕೆಯಾದ ಆಂಗ್ಲ ಭಾಷೆಯನ್ನು ಅಪ್ಪಿಕೊಂಡಿರುವುದು. ಛೆ! ಎಷ್ಟು ಮುಜುಗರ ಆಗುತ್ತೆ!

ಇದಕೆಲ್ಲಾ ಕಾರಣ ಏನು? ನಮ್ಮ ಭಾಷೆಯ ಕಡೆಗೆ ನಮಗಿರೋ ದಿವ್ಯ ನಿರ್ಲಕ್ಷವೇ? ಖಂಡಿತ ಅಲ್ಲ!! ನಮ್ಮನ್ನು ಆಂಗ್ಲದೆಡೆಗೆ ತಳ್ಳಿದ ನಮ್ಮ ಹಳೆಯ ತೆಲೆಗಳು. ಭಾಷೆಯ ಉದ್ಧಾರವೆಂದರೆ ಬರೀ ಸಾಹಿತ್ಯ ಸೃಷ್ಟಿ ಎಂದು ನಮ್ಮನ್ನು ತಪ್ಪು ದಾರಿಗೆ ತಳ್ಳಿದ ಕೆಲವು ಜನ. ಕನ್ನಡ ಕನ್ನಡ ಎಂದು ಬಡಿದುಕೊಂಡರೆ ಏನೂ ಉಪಯೋಗ ಇಲ್ಲ, ಕನ್ನಡವನ್ನು ಜನಜೀವನ ದಲ್ಲಿ ಬಳಸಬೇಕು. ಎಲ್ಲೆಲ್ಲೂ ಕನ್ನಡ ಇರಬೇಕು, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಸಾಹಿತ್ಯ ಎಲ್ಲದರಲ್ಲೂ ಕನ್ನಡ ಇರಬೇಕು. ನಮ್ಮ ಕನ್ನಡ ಸಾಹಿತ್ಯ ಉತ್ಕೃಷ್ಟವಾಗಿದೆ ಅದಕ್ಕೆ ಕಾರಣಕರ್ತರು ಕನ್ನಡದ ಕವಿಗಳು. ಅವರ ಕೆಲಸ ಅವರು ಮಾಡಿದ್ರು. ಆದರೆ ಇನ್ನಿತರೇ ಕ್ಷೇತ್ರಗಳು ಕನ್ನಡವನ್ನು ಅಸ್ಪೃಶ್ಯದ ತರ ನೋಡಿದ್ದಕ್ಕೆ ಕಾರಣ ಏನು? ನಿಜವಾದ ದಲಿತ ಅಂದರೆ ಅದು ನನ್ನ ಕನ್ನಡ ಭಾಷೆ. ಶತಮಾನಗಳಿಂದ ತುಳಿಯುತ್ತಲೇ ಬಂದ ಸಮಾಜದಲ್ಲಿ ಕಲಿತವರು ಎಂಬ ಉನ್ನತ ವರ್ಗವೇ ಇದಕ್ಕೆ ಕಾರಣ ಎಂದು ನನ್ನ ಭಾವನೆ.

ನಮ್ಮ ದೇಶದ ಜನರೇ ವಿಚಿತ್ರ, ಸ್ವಲ್ಪ ಓದಿಕೊಂಡ್ ಬಿಟ್ರೆ ಸಾಕು, ತಮ್ಮ ಭಾಷೆಯನ್ನು, ತಮ್ಮತನವನ್ನೇ ಮರೆತುಬಿಡ್ತಾರೆ. ಇದು ಅತೀ ಎನಿಸಿದರೂ, ನಮ್ಮ ಶಿಕ್ಷಣ ವ್ಯವಸ್ಥೆ ಹಾಗೆ ವರ್ತಿಸುವ ಹಾಗೆ ಮಾಡಿಬಿಡುತ್ತದೆ ಎನ್ನೋದು ನನ್ನ ಅಭಿಮತ.

ನಮ್ಮ ಇಂದಿನ ಆಂಗ್ಲ ಭಾಷೆಯ ಅವಲಂಬನೆಯನ್ನು ತಡೆಯುವುದಕ್ಕೆ ಆಗ್ತಾ ಇರಲೇ ಇಲ್ವಾ? ಈ ಪ್ರಶ್ನೆಗೆ ನನ್ನಲ್ಲಿ ಸ್ಪಷ್ಟವಾದ ಉತ್ತರ ಇಲ್ಲ.

ಕೊನೇ ಮಾತು: ಕನ್ನಡವನ್ನು ಉಳಿಸೋದು ಅಂದ್ರೆ ಒಂದಿಷ್ಟು ಕತೆಗಳು, ಕವನಗಳು ಬರೆಯೋದಲ್ಲ. ಪ್ರತಿಯೊಂದರಲ್ಲೂ ಕನ್ನಡವನ್ನು ಬಳಸೋದು. ಕನ್ನಡ ಅಂದ್ರೆ ಬರೀ ಸಾಹಿತ್ಯ ಅಲ್ಲಾ ಅಲ್ವ? ಮತ್ತೇಕೆ ಬರೀ ಸಾಹಿತಿಗಳು ಹೋರಾಡಬೇಕು ಕನ್ನಡ ಮಾಧ್ಯಮಕ್ಕಾಗಿ!!!?? ಪಾಪ ಅನಿಸ್ತಿದೆ!!!

Friday, December 19, 2014

ಪೆಟ್ರೋಲ್ ಪುರಾಣ!!

ನಮ್ ದೇಶದಲ್ಲಿ ಈಗ ಪೆಟ್ರೋಲ್ ಬೆಲೆ ಇಳಿಕೆಯ ಸದ್ದು ಜೋರಾಗೇ ಕೇಳಿಸ್ತಾ ಇದೆ. ಆದರೆ ಇದೇ ವಿಚಾರವಾಗಿ ಪ್ರಪಂಚದ ಇನ್ನಿತರೇ ದೇಶಗಳಲ್ಲಿ ಯಾವ ರೀತಿಯ ಕೋಲಾಹಲ ಉಂಟು ಮಾಡ್ತಾ ಇದೆ ಇದೆ ಅಂತ ತಿಳಿಸೋ ಒಂದು ಒಂದು ಸಣ್ಣ ಪ್ರಯತ್ನ ಮಾಡಿದಿನಿ ಇವತ್ತು.

ಕಳೆದ ಬೇಸಿಗೆಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಗಣನೀಯ ಇಳಿಕೆಯಾಗಿದೆ. ಯಾಕೆ ಇಳಿಕೆಯಾಗ್ತಿದೆ ಅಂತ ಖಂಡಿತವಾಗಿಯೂ ನನಗೆ ತಿಳಿದಿಲ್ಲ. ಬಲ್ಲ ಮೂಲಗಳ ಪ್ರಕಾರ, ಇತ್ತೀಚಿಗೆ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಹೊಸ ಪೂರೈಕೆದಾರರ ಉಗಮ ಆಗಿದೆ. ಲಿಬಿಯ ಹಾಗೂ ಇನ್ನೀತರೆ ದೇಶಗಳು ಬದಲಾದ ರಾಜಕೀಯ ಪರಿಸ್ಥಿತಿಗಳಿಂದ ಹೆಚ್ಚು ಹೆಚ್ಚು ಪಾಲನ್ನು ಮಾರುಕಟ್ಟೆಗೆ ಪೂರೈಸಲು ಸಾದ್ಯವಾಗ್ತಾ ಇದೆ. ಇನ್ನೊಂದೆಡೆ ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಸಾಂಪ್ರದಾಯಿಕವಲ್ಲದ ಉತ್ಪನ್ನ ಗಣನೀಯವಾಗಿ ಹೆಚ್ಚುತ್ತಾ ಇದೆ (ಶೆಲ್ (shale)- ತೈಲ). ಸಾಂಪ್ರದಾಯಿಕ ಕಚ್ಚಾ ತೈಲ ಪೂರೈಕೆದಾರರಾದ ಹಾಗೂ opec ಸಮೂಹಕ್ಕೆ ಒಳಪಟ್ಟ ರಾಷ್ಟ್ರಗಳು ತಮ್ಮ ಉತ್ಪನ್ನ ಸಾಮರ್ಥ್ಯವನ್ನು ಇಳಿಸುತ್ತಿಲ್ಲ. ಆದ ಕಾರಣ ಪೂರೈಕೆ ಹಾಗೂ ಬೇಡಿಕೆಯ ನಡುವಿನ ಅಂತರ ಹೆಚ್ಚಾಗಿ ಕಚ್ಚಾ ತೈಲದ ಬೆಲೆ ಕಮ್ಮಿ ಆಗಿದೆ. ಇದರ ನೇರ ಪರಿಣಾಮ ಬೆಲೆ ಉತ್ಪಾದಕ ರಾಷ್ಟಗಳ ಮೇಲೆ ಹೇಗಾಗಿದೆ ಎಂದು ವಿಶ್ಲೇಷಣೆ ನಡೆಸಿದಾಗ ತಿಳಿದು ಬಂದ ವಿಷಯಗಳು ಇವು.

ಅತಿಯಾದ ಬೆಲೆ ಕುಸಿತದಿಂದ, ಕೆನಡ ಹಾಗೂ ರಷಿಯದ ಆರ್ಥಿಕ ಬೆಳವಣಿಗೆ ತುಂಬಾ ಹದಗೆಟ್ಟು ಹೋಗಿದೆ. ಸಣ್ಣ ಸಣ್ಣ ಪೂರೈಕೆದಾರ ರಾಷ್ಟ್ರಗಳ ಸ್ಥಿತಿ ಇನ್ನೂ ಗಂಭೀರವಾಗಿದೆ. opec ಕೂಟಗಳಿಗೆ ತಮ್ಮ ಉತ್ಪಾದನೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂಬ ರಷಿಯ ಹಾಗೂ ಇನ್ನಿತರೇ ರಾಷ್ಟ್ರಗಳ ಸಲಹೆಯನ್ನು ಮುಖ್ಯ ಸಾಂಪ್ರದಾಯಿಕ ಉತ್ಪಾದಕ ರಾಷ್ಟ್ರ ಹಾಗೂ opec ಸಮೂಹಕ್ಕ್ಕೆ ಸೇರಿದ ಸೌದಿ ಅರೇಬಿಯಾ ಸೊಪ್ಪು ಹಾಕುತ್ತಿಲ್ಲ. ಇದರ ಅರ್ಥ ತನಗೆ ನಷ್ಟವಾದರೂ ಪರವಾಗಿಲ್ಲ ನನ್ನ ಉತ್ಪಾದನೆಯನ್ನು ಇಳಿಸುವುದಿಲ್ಲ ಎಂದಲ್ಲ.

ಸ್ವಲ್ಪ ಆಳಕ್ಕೆ ಹೋಗುವೆ, ಇಂದಿನ ಕಚ್ಚಾತೈಲದ ಬೆಲೆ ೬೦ ಡಾಲರು ಪ್ರತೀ ಬ್ಯಾರೆಲ್ಲಿಗೆ. ಸಾಂಪ್ರದಾಯಿಕ ಹಾಗೂ ಹೆಚ್ಚಿನ ಮಾರುಕಟ್ಟೆ ಪಾಲು ಇರುವ ಸೌದಿಯಂತಹ ರಾಷ್ಟ್ರಗಳಿಗೆ ಇದರಿಂದ ಅಷ್ಟೇನೂ ತೊಂದರೆಯಾಗದು. ಅದು ೪೦ ಡಾಲರು ಪ್ರತೀ ಬ್ಯಾರೆಲ್ಲಿಗೆ ಹೋಗುವ ತನಕ ತೆಲೆಬಿಸಿ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಸೌದಿಯ ಇಂದನ ಸಚಿವರ ಇತ್ತೀಚಿನ ಹೇಳಿಕೆ ಸ್ಪಷ್ಟಪಡಿಸುತ್ತದೆ . ಕೆನಡವೂ ಸಾಂಪ್ರದಾಯಿಕ ರೀತಿಯಲ್ಲಿ ತೈಲೋತ್ಪಾದನೆ ಮಾಡುತ್ತಿದ್ದರೂ ಅದರ ಪಾಲು ಕಡಿಮೆಯಗಿರುವುದರಿಂದ ಆರ್ಥಿಕತೆಗೆ ಹೊಡೆತ ಬಿದ್ದಿದೆ. ಕೆನಡದ ರೂಪಾಯಿ ಮೌಲ್ಯ ದಿನೇದಿನೇ ಕುಸಿಯುತ್ತಿದೆ. ಇನ್ನು ವೆನೆಜುಯಲ ದಂತಹ ಸಣ್ಣ ರಾಷ್ಟ್ರಗಳಿಗೆ ತುಂಬಾ ತೂಂದರೆ ಉಂಟಾಗಲಿದೆ.

ರಷಿಯದ ಪರಿಸ್ಥಿತಿ ಸಿಕ್ಕಾಪಟ್ಟೆ ಗಂಭೀರವಾಗಿದೆ. ತನ್ನ ಆದಾಯದ ಸಿಂಹಪಾಲು ಹೊಂದಿರೋ ತೈಲ ಬೆಲೆಯ ಕುಸಿತದಿಂದ ಹಾಗೂ ಉಕ್ರೇನ್ ವಿಷಯದಲ್ಲಿ ವಿಶ್ವ ಸಮುದಾಯದ (ಅಮೇರಿಕಾ ಹಾಗೂ ಯುರೋಪ್ ಸಂಘಟನೆ) ಎದುರು ಹಾಕಿಕೊಂಡಿರುವುದರಿಂದ ಅದರ ಕರೆನ್ಸಿಯಾದ ರೂಬೆಲ್ ಡಾಲರಿನ ಎದುರು ಹತ್ತಿರತ್ತಿರ ೬೦ ಪ್ರತಿಶತ ಕುಸಿದಿದೆ. (ಜೂನ್ ತಿಂಗಳಿನಲ್ಲಿ ಒಂದು ಡಾಲರಿಗೆ ೩೫ ರೂಬೆಲ್ ಇತ್ತು, ಇಂದಿಗೆ ಅದು ೬೨ ರೂಬೆಲ್ ಆಗಿದೆ, (ಇದು ದಿನವೂ ಬದಲಾಗುತ್ತಿದೆ, ಮೊನ್ನೆ ಒಂದು ಡಾಲರ್ ಬೆಲೆ ೮೦ ರೂಬೆಲ್ ವರೆಗೂ ಕುಸಿದಿತ್ತು ಹಾಗಾಗಿ ನಾನು ಕೊಟ್ಟಿರುವ ಅಂಕಿ ಅಂಶಗಳು ಒಂದು ಅಂದಾಜಷ್ಟೇ!)) ಇದೀಗ ರಶಿಯಾದ ಪರಿಸ್ಥಿತಿ ತುಂಬಾ ಕ್ಲಿಷ್ಟಕರವಾಗಿದೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಶಿಯಾದ ಅಧ್ಯಕ್ಷ ತೈಲ ಬೆಲೆ ಕಡಿಮೆಯಾಗುವುದರಲ್ಲಿ ಸೌದಿ ಹಾಗೂ ಅಮೇರಿಕಾಗಳು ಮಸಲತ್ತು ನಡೆಸಿರಬಹುದು ಎಂದು ಅಭಿಪ್ರಾಯ ಪಟ್ಟರು. ರೂಬೆಲ್ ಅನ್ನು ಉಳಿಕೊಳ್ಳಲು ಇತ್ತೆಚಿಗಷ್ಟೇ ರಶಿಯಾದ ಕೇಂದ್ರೀಯ ಬ್ಯಾಂಕು ಬಡ್ಡಿದರ ವನ್ನು ೧೭% ಗೆ ಏರಿಕೆ ಮಾಡಿದೆ. ಇದರ ಪರಿಣಾಮ ಖಂಡಿತವಾಗಿ ದೇಶಿಯ ಮಾರುಕಟ್ಟೆಯ ಮೇಲೆ ಬೀರುವುದರಲ್ಲಿ ಯಾವುದೇ ಸಂದೇಹವಿಲ್ಲ.
ಇನ್ನು ಅಮೇರಿಕಾ ದ ವಿಚಾರಕ್ಕೆ ಬರೋಣ, ಅಮೇರಿಕಾದ ಸಾಕಷ್ಟು ಕಂಪನಿಗಳು ಇತ್ತೆಚಿಗಷ್ಟೇ ಸಾಂಪ್ರದಾಯಕವಲ್ಲದ ತೈಲವಾದ shale-ಉತ್ಪಾದನೆಯಲ್ಲಿ ತೊಡಗಿವೆ. ಇದು ಉತ್ಪಾದನೆ ಲಾಭದಾಯಕವಾಗಬೇಕೆಂದರೆ ಕನಿಷ್ಠ ೬೦-೭೦ ಡಾಲರು ಪ್ರತೀ ಬ್ಯಾರೆಲ್ಗೆ ಸಿಗಬೇಕು ಎಂದು ಕೈಗಾರಿಕೊಧ್ಯಮಿಗಳು ಅಭಿಪ್ರಾಯ ಪಟ್ಟಿದ್ದಾರೆ. ಆದಕಾರಣ ಕಂಪನಿಗಳು ಹೊಸ ಹೂಡಿಕೆಯಿಂದ ಹಿಂದೆ ಸರಿಯುತ್ತಿವೆ. ಇಂತಹದ್ದೇ ಒಂದು ಕಂಪನಿಯಾದ vargin ಸಮುದಾಯದ ಅಧ್ಯಕ್ಷ ರಿಚರ್ಡ್ ಬ್ರಾಸ್ನನ್ ಇಂದು, "ಸೌದಿ ಯು ಬೇಕಂತಲೇ ತೈಲ ಬೆಲೆಯ ಇಳಿಕೆಗೆ ಕಾರಣವಾಗಿದೆ ಹಾಗೂ ಇದರಿಂದ ಪರಿಸರ ಸ್ನೇಹಿ ಉತ್ಪಾದನೆಯಾದ shale ತೈಲಕ್ಕೆ ದೊಡ್ಡ ಗಂಡಾಂತರ ಉಂಟು ಮಾಡುತ್ತಿದೆ" ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದಾನೆ. ಈ ವಿದ್ಯಮಾನಗಳಿಂದ ಅಮೇರಿಕಾ ದ ಆರ್ಥಿಕ ಪಂಡಿತರು ಕಳವಳವನ್ನು ವ್ಯಕ್ತಪಡಿಸಿಯಾಗಿದೆ.

ಒಟ್ಟಿನಲ್ಲಿ, ಕಚ್ಚಾ ತೈಲದ ಬೆಲೆ ನಿಜವಾಗ್ಯೂ ಕಡಿಮೆ ಆಗಿದೆಯಾ? ಹಾಗಿದ್ರೆ ಕಾರಣ ಏನುಕೃತಕ ಸೃಷ್ಟಿಯಾಗಿದ್ರೆ, ಯಾಕಾಗಿ ಎನ್ನುವ ಪ್ರಶ್ನೆ ಇದೆ.

ನಿಜವಾದ ವಿಚಾರ ನನಗಂತೂ ಗೊತ್ತಿಲ್ಲ. ಸಧ್ಯಕ್ಕೆ ಒಬ್ಬರ ಮೆಲೋಬ್ಬರು ಗೂಬೆ ಕೂರಿಸುತ್ತಿದಾರೆ!

Saturday, December 6, 2014

ಪರದೇಶದಲ್ಲಿ ಪರದಾಟ-೧

ಕೆಲವೊಂದು ಸಲ ಭಾಷೆ ಅನ್ನೋದು ಎಷ್ಟು ಮುಖ್ಯ ಅಂತ ಗೊತ್ತಾಗಬೇಕಾದರೆ, ಹೊರ ರಾಜ್ಯಗಳಿಗೆ, ಹೊರ ದೇಶಗಳಿಗೆ ಹೋಗಬೇಕು. ನಮ್ಮ ದೇಶದಲ್ಲಿ ಹೆಂಗೆಂಗೋ ಮಾಡಿ ಸಂವಹನ ಮಾಡಿಬಿಡ್ತಿವಿ (ತಮಿಳುನಾಡು ಬಿಟ್ಟು). ಆದರೆ ಒಂದು ಸಲ ದೇಶ ಬಿಟ್ಟ್ವಿ ಅಂದ್ರೆ ಮುಗಿದು ಹೋಯ್ತು. ಅದರಲ್ಲೂ, ನೀವು ಯುರೋಪಿಯನ್ ದೇಶಗಳಿಗೋ (UK ಬಿಟ್ಟು), ಆಫ್ರಿಕಾ ಕ್ಕೊ, ಜಪಾನ್ ಗೋ ಹೋದ್ರಿ ಅಂದ್ರೆ ಮುಗಿದೇ ಹೋಯ್ತು ನಿಮ್ಮ ಕಥೆ. ಈಗ ನಾ ಹೇಳೋಕೆ ಹೊರಟಿರೋದು ಅಂತದೇ ಒಂದು ಕಥೆ (ಸುಮಾರು ಇವೆ, ಆದ್ರೆ ಸದ್ಯಕ್ಕೆ ಒಂದು ಸಾಕು).

ರಷಿಯದಲ್ಲಿ ಜನ ಜಪ್ಪಯ್ಯ ಅಂದ್ರೂ ಒಂದೇ ಒಂದು ಪದ ಆಂಗ್ಲ ಭಾಷೆ ಮಾತಾಡೋಲ್ಲ ಅಂತಾರೆ. ಪಾಪ ಬಂದರೆ ತಾನೇ ಮಾತಾಡೋಕೆ. ನಾವು ಏನೇ ಆಂಗ್ಲ ಭಾಷೆನಲ್ಲಿ ಮಾತಾಡಿದ್ರೂ ಅದು ಅರಣ್ಯರೋಧನ ಅಷ್ಟೇ!! ಮಾಸ್ಕೋ ಗೆ ಬಂದ ಹೊಸದರಲ್ಲಿ ನನಗಂತೂ ತೆಲೆ ಕೆಟ್ ಹೋಗಿತ್ತು. ಎಲ್ಲಾ ಮಾಹಿತಿ ರಷ್ಯನ್ ನಲ್ಲೆ ಇರುತ್ತೆ. ಸಧ್ಯ ಸಂಖ್ಯೆಗಳು ಮಾತ್ರ ಹಿಂದೂ-ಅರೇಬಿಕ್ (ನಿಜವಾಗಿಯೂ ಅವು ನಮ್ಮ ಹೀರೀಕರು ಕಂಡುಹಿಡಿದ ಸಂಖ್ಯೆಗಳೇ, ಅರೇಬಿಯನ್ಗಳು ಕದ್ದು ಅದನ್ನೇ ಹಿಂದೂ-ಅರೇಬಿಕ್ ಅಂತ ಮಾಡಿದ್ದು ಬೇರೆ ವಿಷಯ). ಏನೋ ಅದೊಂದು ಕಾರಣದಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆ, ಸೂಪರ್ ಮಾರ್ಕೆಟ್ ನಲ್ಲಿ ಹಣ ಕೊಡುವಾಗ ತೊಂದರೆ ಆಗೋಲ್ಲ. ಆದರೆ ನಿಮಗೆ ಮೊದಲೇ ನೀವು ಇಳಿಯುವ ಸ್ಥಳ ಚೆನ್ನಾಗಿ ಗೊತ್ತಿರಬೇಕು ಇಲ್ಲ ಅಂದ್ರೆ ಕಥೆ ಮುಗಿದಂತೆಯೇ. ನಾನು ಏನೋ ಹೇಳೋಕೆ ಹೋಗಿ ಮತ್ತಿನ್ನನೀನೋ ಶುರು ಮಾಡಿಬಿಟ್ಟೆ. ಈಗ ವಿಷಯಕ್ಕೆ ಬರೋಣ. ಇಲ್ಲಿ ಸಿಕ್ಕಾಪಟ್ಟೆ ಚಳಿ ಹವೆ ಇರ್ರೋದ್ರಿಂದ ಚರ್ಮ ಒಡೆದು ಕಡಿಯೋಕೆ ಶುರು ಆಗುತ್ತೆ. ನಾನೂ ಬೆಂಗಳೂರಿಂದ ಬರುವಾಗ vaselline ಅಥವಾ moisturizer ತರಲಿಲ್ಲ. ನನ್ನ ಚರ್ಮ ಒಡೆದು ಕಡಿಯೋಕೆ ಶುರು ಆಯಿತು. ಏನ್ ಮಾಡಲಿ, ಅಂಗಡಿಗೆ ಹೋಗಿ ಏನ್ ಅಂತ ಕೇಳೋದು? ಭಾಷೆ ಬರೋಲ್ಲವೇ. ನನ್ನ ಕೆಲವು ರಷ್ಯನ್ ಸಹೋದ್ಯೋಗಿಗಳಿಗೆ ಆಂಗ್ಲ ಭಾಷೆ ಬರುತ್ತಿತ್ತದರೂ ಅವರಿಗೇಕೆ ಸುಮ್ಮನೆ ತಾಪತ್ರಯ ಅಂದು ಕೇಳುವ ಮನಸಾಗಲಿಲ್ಲ. ನನ್ನ ವಸತಿ ಸಮುಚ್ಚಯದ ಹತ್ತಿರವೇ ಒಂದು ಬಹುದೊಡ್ಡ supermarket ಇದೆಯಾದರೂ ಅಲ್ಲಿ ಎಲ್ಲವೂ ರಷ್ಯನ್ ಮಯ. ಅಲ್ಲಿ ನನ್ನ ಗೂಗಲ್ translator ಬೇರೆ ಕೆಲಸ ಮಾಡೋಲ್ಲ (ಸಿಕ್ಕಾಪಟ್ಟೆ ಜನಜಂಗುಳಿ ಇಂದ ನೆಟ್ವರ್ಕ್ ಸಮಸ್ಯೆ). ಕೊನೆಗೆ ನಾನೇ ಹುಡುಕಿ ಬಿಡುವ ಅಂತ ಹೊರಟೆ. ಅಲ್ಲಿಗೆ ನಾನು ಅವಾಗವಾಗ ಹೋಗ್ತಾ ಇರ್ತೇನೆ. ಹೋಗಿ ಹುಡುಕಲು ಶುರು ಮಾಡಿದೆ, ನೂರೆಂಟು ಕ್ರೀಂ ಗಳು ಇವೆ ಆದರೆ ಅದರಲ್ಲಿ ನನಗೆ ಬೇಕಾದದ್ದು ಯಾವುದು ಅಂತ ಹೆಂಗೆ ಗೊತ್ತಾಗುತ್ತೆ. ಪೊಟ್ಟಣದ ಮೇಲಿನ ಮಾಹಿತಿ ಎಲ್ಲ ರಷ್ಯನ್ ನಲ್ಲೆ ಇರುತ್ತೆ. ಹುಡುಕಿ ಹುಡುಕಿ ಸೋತೆ, ಸಮಯವಾಯಿತೆಂದು ವಾಪಾಸ್ ಬಂದೆ. ಅದರ ಮಾರನೆ ದಿನ, ಇವತ್ತು ತೆಗೆದುಕೊಳ್ಳಲೇ ಬೇಕು ಅಂತ, ಕೋಣೆಯಲ್ಲಿಯೇ ಕುಳಿತು ಸ್ವಲ್ಪ ಸಂಶೋಧನೆ ಮಾಡಿ ಹೊರಟೆ. ಇಲ್ಲಿ ಸಿಗಬಹುದಾದ ಕೆಲವೊಂದು ಕ್ರಿ೦ ಗಳ ಪೊಟ್ಟಣ ದ ಫೋಟೋ ಜಾಲತಾಣಗಳಿಂದ ನನ್ನ ಪುಟ್ಟ ಮೊಬೈಲ್ ಫೋನ್ ನಲ್ಲಿ ಇಳಿಸಿಕೊ೦ಡು ಹೋದೆ. ಆದರೆ ಅಲ್ಲಿ ಮತ್ತದೇ ಹಣೆಬರಹ. ನಾನು ತೆಗೆದು ಕೊಂಡ ಹೋದ ಫೋಟೋ ದಲ್ಲಿ ಇರುವ ಯಾವ ಕ್ರಿ೦ ಕೂಡ ಅಲ್ಲಿರಲಿಲ್ಲ. ಅಲ್ಲಿರೋರನ್ನ ಕೇಳಿದರೆ, ಪಾಪ ಅವಕ್ಕೆ ನಾನು ಏನನ್ನ ಕೇಳ್ತಾ ಇದೀನಿ ಅಂತಾನೆ ಗೊತ್ತಾಗ್ತಾ ಇಲ್ಲ. ಏನ್ ಮಾಡೋದು ಅಂತ ಅತ್ಲಿಂದ ಇತ್ಲಾಗೆ, ಇತ್ಲಿಂದ ಅತ್ಲಾಗೆ ಅಲೀತ ಇದ್ದೆ. ಆಗ ಕಾಣಿಸ್ತು ನೋಡಿ ಒಂದು ಪೊಟ್ಟಣ ಮೂಲೆಯಲ್ಲಿ, ನಮ್ಮ ದೇಶದ್ದು, ಆದರ ಬಣ್ಣ, ಡಿಸೈನ್ ನೋಡೇ ಗುರುತು ಹಿಡಿದು ಬಿಟ್ಟೆ, ನಮ್ BORO PLUS. ಒಂತರ ಸ್ವರ್ಗನೇ ಧರೆಗೆ ಇಳಿದಂತೆ ಆಯ್ತು ಆ ಕ್ಷಣ. ನಂಗೆ ಬೇಕಾಗಿದ್ದು ಸಿಗದೇ ಹೋದರೂ. ಅದರಿಂದ ತಕ್ಕಮಟ್ಟಿಗೆ ಕೆಲಸ ಆಗ್ತಾ ಇದ್ದಿದ್ದರಿಂದ ತೆಗೊಂಡು ಬಂದೆ. ಅದರ ಮುಂದಿನ ವಾರ ನನ್ನ ಭಾರತೀಯ ಸಹೋದ್ಯೋಗಿಯ ಮನೆಗೆ ಹೋದಾಗ (ಅವನದ್ದು ನನ್ನ ವಸತಿ ಸಮುಚ್ಚಯದಿಂದ ತುಂಬಾ ದೂರ). ಅವನಲ್ಲಿ ನನ್ನ ಸಮಸ್ಯೆ ಹೇಳಿಕೊಂಡೆ. ಅವನು ಮಾಸ್ಕೋ ದಲ್ಲೇ ಎರಡು ವರ್ಷದಿಂದ ಇದಾನೆ, ಅವನು ಬಂದ ಹೊಸದರಲ್ಲಿ ನನ್ನ ತರಾನೆ ಪರದಾಡಿದ ಕಥೆ ಹೇಳಿಕೊಂಡ. ಇಬ್ಬರೂ ಸಿಕ್ಕಾಪಟ್ಟೆ ನಕ್ವಿ ನಮ್ ಸ್ಥಿತಿ ನೆನೆಸಿಕೊಂಡು. ಆಮೇಲೆ ಒಂದು ಬಾಟಲಿ ತೋರಿಸಿದ, ಅದರ ಚಿತ್ರವನ್ನು ಅಲ್ಲೇ ಕ್ಲಿಕ್ಕಿಸಿ save ಮಾಡಿಕೊಂಡೆ. ನನ್ನ ಕೋಣೆ ಬರೋ ದಾರೀಲಿ ಅದೇ supermarket ಗೆ ಹೋಗಿ ಅಲ್ಲಿರೋ salesman ಗೆ ತೋರಿಸಿದಾಗ ಅವ್ನು ಅದು ಇರೋ ಸ್ಥಳ ತೋರಿಸಿದ.. ಹೀಗೆ ಮುಗೀತು ನನ್ನ ಒಂದು moisturizer ಪುರಾಣ.

ಇಂತಹ ಅದೆಷ್ಟೋ ವಿಚಾರ ದಿನವೂ ನಡಿತ ಇರುತ್ತೆ. ಇವರ ಭಾಷಾಭಿಮಾನವನ್ನು ನಾವು ನೋಡಿ ಕಲಿಯೋದು ಸಾಕಷ್ಟಿದೆ!!

Tuesday, November 4, 2014

ಬಹುದಿನಗಳ ನಂತರ!

ಛೆ!! ಭರ್ತಿ ಒಂದೂವರೆ ವರ್ಷವೇ ಕಳೆದು ಹೋಯಿತು ನಾನು ನನ್ನ ಮೂಗಿನ ನೇರಕ್ಕೆ ಬರೆದು, ಕೆಲವೊಂದು ಸಲ ನಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡೋದು ಒಳ್ಳೆದೇ. ಅಷ್ಟಕ್ಕೂ ಈ ರೀತಿ ಬರೆಯೋ ಹುಚ್ಚು ನನಗೆ ಅಂಟಿಕೊಂಡಿದ್ದರೂ ಹ್ಯಾಗೆ?  ಯಾಕೆಂದರೆ ನನ್ನ ಮೂಗಿನ ನೇರಕ್ಕೆ ವಿಶ್ಲೇಷಿಸಿದ/ಬರ್ಕೊಂಡ ವಿಚಾರಗಳು ಎಲ್ಲರಿಗೂ ಸರಿ ಬರುತ್ತೆ ಅನ್ನೋದು ಹೇಳೋಕೆ ಆಗೋಲ್ಲ. ಆದರೂ ಇದೊಂದ್ ತರ ಹುಚ್ಚು ನನಗೆ. ಕೆಲವೊಂದು ಹುಚ್ಚುಗಳು ಒಳ್ಳೆಯವೇ. ನಾನು ಅವನ್ನು ಯಾವ ರೀತಿ ಬಳಸಿಕೊಳ್ಳುತ್ತೇವೆ ಎಂಬುವುದರ ಮೇಲೆ ನಿರ್ಧಾರಿತವಾಗಿರುತ್ತೆ. ಏನಾದರೂ ಬರೆದೇ ಬಿಡೋಣ ಇವತ್ತು ಅಂತ ಕೂತುಬಿಟ್ಟಿದ್ದೇನೆ ಆದರೆ ಏನ್ ಬರೀಲಿ ಅಂತಾನೆ ಗೊತ್ತಾಗ್ತಾ ಇಲ್ಲ. ನಾನು ಸುಮ್ನೆ ಕಾಲಹರಣ ಮಾಡಿದ್ರೆ ನನ್ನ ಸಮಯವಲ್ಲದೆ ಇದನ್ನು ಓದುವುವರ ಕಾಲವೂ ಹಾಳು.

ಕೆಲವೊಂದು ಸಲ ನಾವು ಎಷ್ಟು ಸಮಯವಿದ್ದರೂ ಸಹ ನಾನು ಬಿಡುವಿಲ್ಲದ ಮನುಷ್ಯ ಎಂದು ತೋರಿಸುಕೊಳ್ಳುವುದರಲ್ಲೇ ನಮಗೆ ಏನೋ ಒಂದು ಅವ್ಯಕ್ತ ಸುಖ. ಯಾರೋ ಒಬ್ಬ ಮಹಾನುಭಾವ ಹೇಳಿದ ನೆನಪು, ಯಾರು ತಮ್ಮ ಎಲ್ಲ ಕೆಲಸಗಳಿಗೂ ಬಿಡುವು ಮಾಡಿಕೊಳ್ಳುತ್ತಾರೋ ಅವರೇ ನಿಜವಾಗಿಯೂ ಬಿಡುವು ಇಲ್ಲದೆ ಇರುವ ಮನುಷ್ಯ. ಕೆಲವೊಂದು ಸಲ ನಮಗೆ ಇಷ್ಟವಾದ ಕೆಲಸವನ್ನು ಏನಾದರೂ ಮಾಡಿ ನೆರವೇರಿಸಿಯೇ ತೀರುತ್ತೇವೆ. ನಮಗೆ ಎಷ್ಟೇ ಹೊಟ್ಟೆ ತುಂಬಿರಬಹುದು ಆದರೆ ನಮ್ಮಿಷ್ಟದ ತಿಂಡಿಯನ್ನು ತಂದಾಗ ಅದನ್ನು ತಿನ್ನದೇ ಇರಲು ಸಾಧ್ಯವೇ, ನಮ್ಮ ಹೊಟ್ಟೆ ಕೇಳದೆ ಇರಬಹುದು ಆದರೆ, ನಮ್ಮ ನಾಲಗೆ ಹಾಗೂ ಕಳ್ಳ ಮನಸ್ಸು ಹ್ಯಾಗಾದರೂ ಮಾಡಿ ಅದನ್ನು ಕಬಳಿಸುವ ಹೊಂಚು ಹಾಕುತ್ತಿರುತ್ತವೆ.

ಈಗ ನಮ್ಮ ದೇಶದಲ್ಲಿ ಇಲ್ಲದೆ ಸ್ವಚ್ಛ ಭಾರತ ಅಭಿಯಾನದ ಬಗ್ಗೆಯೇ ಮಾತು. ಒಬ್ಬ ಮಹನೀಯ ಹೇಳಿದ್ದಾರೆ, "be the change that you want see". ನಮ್ಮ ದೇಶ ಸ್ವಚ್ಛವಾಗಿರಬೇಕು ಅಂದರೆ ನಾವು ಮೊದಲು ಸ್ವಚ್ಚವಾಗಿದ್ರೆ ಒಳ್ಳೆದಲ್ಲವೇ. ಕೆಲವೊಬ್ಬ ಪ್ರಗತಿಪರ ಬುದ್ದಿಜೀವಿಗಳ ಪ್ರಕಾರ ಮನಸ್ಸು ಸ್ವಚ್ಚವಾಗಿದ್ರೆ ಸಾಕಂತೆ, ಅದಕ್ಕೆ ಅನಿಸುತ್ತೆ ಈ ಬುದ್ದಿ ಜೀವಿಗಳು ಯಾವಾಗಲೂ ಮಾಸಲಾದ, ಹಳೆಯ, ಕೊಳೆಯಾದ ಬಟ್ಟೆಗಳನ್ನು ಬಳಸುತ್ತಾರೆ. ನೀವು ಏನೇ ಹೇಳಿ, ನಾವು ಬಿಸ್ಕತ್ ತಿನ್ನೋಕೂ ಮೊದಲು ಅದರ ಪ್ಲಾಸ್ಟಿಕ್ ಕವಚ ನೋಡ್ತೀವಿ ತಾನೇ. ಪ್ಲಾಸ್ಟಿಕ್ ಅಲ್ವ ಏನೂ ಆಗೋಲ್ಲ ಅಂತ ಚರಂಡಿಯಲ್ಲಿ ಬಿದ್ದಿರೋ ಬಿಸ್ಕತ್ ಪೊಟ್ಟಣ ಎತ್ತಿಕೊಂಡು ತಿನ್ನೋಕೆ ಆಗುತ್ತಾ? ನಮ್ಮ ಮನಸ್ಸು ಹ್ಯಾಗಿದೆ ಇನ್ನೊಬ್ಬರಿಗೆ ಅನಿಸಬೇಕು ಅಂದ್ರೆ ಮೊದಲು ನಮ್ಮ ಮನಸಿರೋ ಈ ದೇಹ, ಅದು ವಾಸ ಮಾಡ್ತಾ ಇರೋ ಜಾಗ ಚೆನ್ನಾಗಿರಬೇಕಲ್ವ? ಏನೇ ಆಗಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡಿರುವ ನಮ್ಮ ಮೋದಿಗೆ ಒಂದು ದೊಡ್ಡ ಸಲಾಂ! ಅಲ್ಲ ಆ ಮನುಷ್ಯನಿಗೆ ಈ ಥರ ಯೋಚನೆಗಳು ಹ್ಯಾಗೆ ಬರ್ತವೆ ಅಂತ. ನಾವು ಶುಚಿಯಾಗಿ ಇರಬೇಕು ಅಂತ ಎಲ್ಲರಿಗೂ ಗೊತ್ತು, ಆದರೂ ಅದನ್ನೇ ಒಂದು ಕಾರ್ಯಕ್ರಮ ಅಂತ ಜಾರಿ ಮಾಡಿ, ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸೋ ಕೆಲಸ ಮಾಡ್ತಾ ಇದರಲ್ಲ ಅವ್ರು ಅದಕ್ಕೆ ಮೆಚ್ಚಬೇಕು. ಹಿಂದೊಮ್ಮೆ ನಮ್ಮ ದೇಶದಲ್ಲಿ ಬರಗಾಲ ಪರಿಸ್ಥಿತಿಯೋ, ಯುದ್ದವೋ ಇದ್ದಾಗ ಅಂದಿನ ಪ್ರಧಾನ ಮಂತ್ರಿ ಇದೇ ರೀತಿ ದೇಶವಾಸಿಗಳೇ, ನಮ್ ಹತ್ರ ದವಸ ಧಾನ್ಯ ಕಮ್ಮಿ ಇದೆ ಎಲ್ಲರೂ ಒಂದು ಹೊತ್ತು ಉಪವಾಸ ಇರೋಣ ಎಂದು ಕರೆ ಕೊಟ್ಟಾಗ, ಎಲ್ಲರೂ ಅದೇ ರೀತಿ ಮಾಡಿದ್ರು ಅಂತ ಈಗಿನ ಕಾಲದ ಹುಡುಗರಿಗೆ (ನನ್ನನೂ ಸೇರಿಸಿ) ಹೇಳಿದರೆ ನಕ್ಕು ಸುಮ್ಮನಾಗ್ತಾರಷ್ಟೇ. ರಾಜಕಾರಣಿಗಳ ಬಗ್ಗೆ ಒಂದು ಸಿನಿಕತೆ ಇರುವ ಈ ಕಾಲದಲ್ಲಿ ಆ ತರಹದ ದೃಷ್ಟಾಂತಗಳು ಬರಿ ಕಲ್ಪನೆ ಎಂದು ಭಾಸವಾಗಿರಲೂಬಹುದು. ಆದರೆ ನಮ್ಮ ಜನ ಪ್ರಾಮಾಣಿಕತೆಗೆ ಯಾವತ್ತೂ ಬೆಲೆ ಕೊಡ್ತಾರೆ ಅನ್ನೋದಕ್ಕೆ ನಿದರ್ಶನವೇ ನಮ್ಮ ಪ್ರಧಾನಿ ಮೋದಿ.

ಹೀಗೆ ಬರಿತಾ ಹೋದರೆ ಬರಿತಾನೆ ಇರಬಹುದು. ಆದರೂ, ಬರವಣಿಗೆಗೆ ಒಂದು ಧ್ಯೇಯ ಇದ್ದರಷ್ಟೇ ಅದಕ್ಕೊಂದು ಭೂಷಣ.

ಎಲ್ಲರಿಗೂ ಒಳ್ಳೆದಾಗಲಿ, ಮತ್ತೆ ಸಿಗೋಣ, ಮಾತಾಡಲಿಕ್ಕೆ, ಸಂವಾದಿಸಲ್ಲಿಕ್ಕೆ ಸಿಕ್ಕಾಪಟ್ಟೆ ವಿಷಯ ಇವೆ!!