ಈಗೀಗ ಕೃಷಿ ಚಟುವಟಿಕೆಗಳ ಬಗ್ಗೆ, ಕೃಷಿಕರ ಬಗ್ಗೆ ಆಕ್ಟಿವಿಸಂ ಜ್ಯಾಸ್ತಿ ಆಗ್ತಾ ಇದೆ. ಕೃಷಿಕರೇ ಅಲ್ಲದ ಬುಜೀ ಗಳು ಸರ್ಕಾರವನ್ನು ಟೀಕಿಸುವ ಭರದಲ್ಲಿ ತಮಗೆ ತೋಚಿದ್ದನ್ನು ಹೇಳಿಬಿಡುವುದರಲ್ಲಿ ನಿಸ್ಸೀಮರು. ಆದರೆ ಸಮಸ್ಯೆಯ ಆಳಕ್ಕೆ ಇಳಿದು ಯಾರೂ ಮಾತನಾಡುತ್ತಿಲ್ಲ ಎಂದು ನನ್ನ ಭಾವನೆ. ಉದಾಹರಣೆಗೆ ಇತ್ತೀಚಿನ ಕಬ್ಬು ಬೆಳೆಗಾರರ ಸಮಸ್ಯೆ, ಪ್ರತೀ ವರ್ಷವೂ ಇದೆ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೂ ಕಬ್ಬು ಬೆಳೆಯುವ ಕೃಷಿಕರು ಹೆಚ್ಚುತ್ತಲೇ ಇದ್ದಾರೆ. ನನ್ನ ಪ್ರಶ್ನೆ ಇಷ್ಟೇ, ಇಷ್ಟೆಲ್ಲಾ ತೊಂದರೆಗಳಿದ್ದರೂ ಪ್ರತೀ ಬಾರಿಯೂ ಕೃಷಿಕ ಕಬ್ಬನ್ನೇ ಬೆಳೆಯಲು ಆಯ್ದುಕೊಳ್ಳುವುದೇಕೆ? (ನನ್ನ ನಿಲುವಿನಲ್ಲಿ ತಪ್ಪಿದ್ದರೆ ಕ್ಷಮಿಸಿ, ಅಲ್ಪಸ್ವಲ್ಪ ಕೃಷಿಭೂಮಿ ಇದ್ದರೂ ನಾನೇನೂ ಕೃಷಿಕನಲ್ಲ, ಕೃಷಿಕರನ್ನು ತೀರಾ ಹತ್ತಿರದಿಂದ ಬಲ್ಲವನೂ ಅಲ್ಲ, ಆದರೆ ಹಿಂದೆ ಬಾಲ್ಯದಲ್ಲಿ ಚಿಕ್ಕಪ್ಪಂದಿರ ಹಾಗೂ ಇನ್ನಿತರೇ ಸಂಬಂದಿಗಳ ಕೃಷಿಯನ್ನು ನೋಡಿದ್ದಿದೆ, ಅವರ ಕೈ ಜೋಡಿಸಿದ್ದಿದೆ). ಒಬ್ಬ ಜನಸಾಮನ್ಯನಾಗಿ ಈ ಪ್ರಶ್ನೆ ನನ್ನಲ್ಲಿ ಹುಟ್ಟುತ್ತಿದೆ. ನಿಜವಾಗಿಯೂ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲವೇ ಅಥವಾ ಇದರಲ್ಲೂ ಮಾಫಿಯಾ ಇದೆಯಾ?
ಹಾಗೆ ನೋಡಿದರೆ ಕೃಷಿಕರದ್ದೂ ತಪ್ಪು ಇದೆಯಲ್ಲವೇ? ಹಿಂದೆ ನಮ್ಮ ಸಂಬಂಧಿಯೊಬ್ಬರ ಮನೆಗೆ ಭೇಟಿ ಕೊಟ್ಟ ಸಂಧರ್ಭದಲ್ಲಿ ಹಾಗೆ ಮಾತನಾಡುವಾಗ ಅವರು ತಮ್ಮ ಬಹುಪಾಲು ಹೊಲದಲ್ಲಿ ಅಡಿಕೆ ಹಾಕಿದೆ ಎಂದು ಹೇಳಿದಾಗ ನಂಗೆ ಆಶ್ಚರ್ಯಯಾಯಿತು. ಅದಕ್ಕೂ ಬಹಳ ವರುಷಗಳ ಹಿಂದೆ ಅವರು ತಹೆರೇವಾರಿ ಬೆಳೆಗಳನ್ನು ಬೆಳೆಯುತ್ತಿದ್ದರು, ತರಕಾರಿ, ಭತ್ತ, ಜೋಳ ಹಾಗೂ ಹಣ್ಣುಗಳನ್ನೂ ಬೆಳೆದಿದ್ದಿದೆ.ಕಾರಣ ಕೇಳಿದಾಗ ಅವರು ಹೇಳಿದ್ದು ಇಷ್ಟು, ಬೇರೆ ಬೆಳೆಗಳನ್ನು ಬೆಳೆಯಲು ಸಿಕ್ಕಾಪಟ್ಟೆ ಗಮನ ಹರಿಸಬೇಕು ತುಂಬಾ ಕೆಲಸ, ಹೀಗಾಗಿ ಅಡಿಕೆ ಹಾಕಿ ಬಿಟ್ಟಿದ್ದೇನೆ. ಮೇಲಾಗಿ ಈಗೀಗ ಕೃಷಿ ಕಾರ್ಮಿಕರು ಸಿಗುತ್ತಿಲ್ಲ ಎಂದೂ ಹೇಳಿದರು. ಈ ಕಬ್ಬು ಕೂಡ ಅದೇ ರೀತಿಯದಲ್ಲವಾ? ಹಲವಾರು ಕಳೆ ತೆಗೆಯುವ ಗೋಜಿಲ್ಲ ನೀರು ಹರಿಸುತ್ತಾ ಇದ್ದರಾಯಿತಲ್ಲ ಎಂದೂ ಅಂದರು. ನಾನಿಲ್ಲಿ ಯಾರನ್ನೂ ಹೀಗಳೆಯುತ್ತಿಲ್ಲ ನಾನು ಕೇಳಿದ್ದನ್ನು ನೋಡಿದ್ದನ್ನು ಹಂಚಿಕೊಂಡೆ ಅಷ್ಟೇ.
ಹಿಂದೆ ಬಹುಪಾಲು ಕೃಷಿಕರು ಅನೇಕ ರೀತಿಯ ಬೆಳೆಗಳನ್ನು ಬೆಳೆಯುತ್ತಿದುದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ ಅಲ್ಲವೇ? ನವಣೆ, ಸಜ್ಜೆ ಯಂತಹ ದ್ಯಾನ್ಯಗಳು ಜನಮಾನಸದಿಂದ ದೂರ ಹೋಗಿಯಾಗಿದೆ. ನಾನೂ ಈ ಧಾನ್ಯಗಳನ್ನು ಬಾಲ್ಯದಲ್ಲಿ ನೋಡಿದ್ದಷ್ಟೇ ನೆನಪು. ಹೀಗಾಗಿ ಕೃಷಿಕರ ಸಮಸ್ಯೆ ಬರೀ ಬೆಂಬಲ ಬೆಲೆ ಕೊಟ್ಟರೆ ಸರಿಯಾಗುವುದಿಲ್ಲ ಎಂದು ನನ್ನ ಭಾವನೆ.
ಇನ್ನೊಂದು ಉದಾಹರಣೆ ಕೊಡ್ತೀನಿ, ನನ್ನ ಒಬ್ಬ ಸ್ನೇಹಿತರಿದಾರೆ, ವಿಜ್ಞಾನಿಯಾದರೂ ಅವರಿಗೆ ಕೃಷಿಯಲ್ಲಿ ತುಂಬಾ ಆಸಕ್ತಿ. ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಅವರ ತಂದೆಯ ಹೆಗಲುಕೊಟ್ಟು ಕೆಲಸ ಮಾಡುವುದೇ ಅಲ್ಲದೆ, ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡುವುದು ಎಂಬುದರ ಬಗ್ಗೆ ತಮ್ಮ ಇನ್ನಿತರೇ ಸಹೋದ್ಯೋಗಿಗಳ ತೆಲೆ ತಿಂದಾದರೂ ಕೆಲವೊಂದು ಬಹುಮುಖ್ಯ ಸಲಹೆಗಳನ್ನು ಪಡೆಯುತ್ತಾರೆ. ಕೃಷಿ ವಿ ವಿ ಗಳಿಗೆ ಭೇಟಿ ಕೊಟ್ಟು ಅಲ್ಲಿನ ವಿಜ್ಞಾನಿಗಳ ನೂತನ ತಳಿಗಳ ಬಗ್ಗೆಯೋ, ನವೀಕೃತ ಕೀಟ ನಿವಾರಣೆಯಾ ಬಗ್ಗೆಯೋ ತಿಳಿದುಕೊಂಡು ತಮ್ಮ ಹೊಲದಲ್ಲಿ ಅದರ ಪ್ರಯೋಗ ನಡೆಸುತ್ತಾರೆ. ತಮ್ಮ ತಂದೆ ನಡೆಸುತ್ತಿದ್ದ ಪಾರಂಪರಿಕ ಕೃಷಿಯನ್ನೇ ವಿಜ್ಞಾನವನ್ನು ಉಪಯೋಗಿಸಿ ಲಾಭದಾಯಕವಾಗಿ ಬದಲಾಯಿಸಿದ್ದಾರೆ. ಕೆಲವೊಮ್ಮೆ ಇತರರಿಂದ ನಗೆಪಾಟಲಿಗೆ ಗುರಿಯಾದರೂ ಧೃತಿಗುಂದದೆ ಮುನ್ನಡೆಯುತ್ತಿದ್ದಾರೆ. ಹೀಗೆ ಅವರು ತಮ್ಮ ಅನುಭವಗಳನ್ನ ಹೇಳಿಕೊಳ್ಳುವಾಗ, ಒಮ್ಮೆ ಬಾಳೆಗೆ ಔಷದಿ ಸಿಂಪಡಿಸುವ ಹೊಸ ವಿಧಾನವನ್ನು ಅವರ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹೇಳಿಕೊಡುತ್ತಾ ಇದ್ದಾಗ, ಅವರ ಕಾರ್ಮಿಕರು ಏನ್ ಸರ್ ಎಷ್ಟು ವರ್ಷದಿಂದ ನಾವು ಈ ಕೆಲಸ ಮಾಡ್ತಿಲ್ಲ ನಮಗೆ ಹೇಳಿಕೊಡೋದಿಕ್ಕೇ ಬರ್ತೀರಲ್ಲ ಎಂದು ಅಂದರಂತೆ. ಆದರೂ ಇವರೂ ಹೊಸ ರೀತಿಯಲ್ಲಿ ಔಷದ ಸಿಂಪಡನೆ ಮಾಡಿಸಿದರಂತೆ. ನನ್ನ ಸ್ನೇಹಿತರ ತಂದೆಗೂ ಇದು ಹಾಸ್ಯಾಸ್ಪದವಾಗಿ ಕಂಡುಬಂತಂತೆ. ಇವರು ಎಲ್ಲ ಕೆಲಸ ತಮ್ಮ ಕಾರ್ಯಸ್ಥಾನಕ್ಕೆ ವಾಪಾಸಾಗಿ ಎರಡು ದಿನವಾದ ಮೇಲೆ ಅವರ ತಂದೆ ಇವರಿಗೆ ಕರೆ ಮಾಡಿ, ಹೊಸ ವಿಧಾನದ ಪ್ರಭಾವವನ್ನು ಹೊಗಳಿದ್ದೇ ಹೊಗಳಿದ್ದು. ಆಮೇಲೆ ಇವರ ಯಾವುದೇ ಯೋಜನೆಗಳಿಗೆ ತಂದೆಯವರು ಪೂರ್ತಿ ಸಹಕಾರವೆಂದು ಹೇಳಬೇಕಿಲ್ಲ ತಾನೇ. ಈ ನಮ್ಮ ಸ್ನೇಹಿತರ ದೆಸೆಯಿಂದ ಕೃಷಿಯನ್ನು ಬಲ್ಲದ ನನ್ನಂತ ಅನೇಕ ಸ್ನೇಹಿತರಿಗೆ ಕೃಷಿ ಪಾಠ ಬಲವಂತದ ಮಾಘಸ್ನಾನವೆನಿಸಿದರೂ ಅದರಿಂದ ತಿಳಿದುಕೊಂಡದ್ದು ಬಹಳ.
ನನ್ನ ಆಕ್ಷೇಪಣೆ ಏನೆಂದರೆ, ಕೃಷಿಯ ಮಹತ್ವವನ್ನು ಜನರಿಗೆ ಹೇಳದೆ ಹಾಗೂ ಸುಧಾರಿತ ಕೃಷಿಯನ್ನು ಮಹತ್ವವನ್ನೂ, ಕೃಷಿಯಲ್ಲಿ ವಿಜ್ಞಾನದ ಮಹತ್ವವನ್ನೂ, ಪಾರಂಪರಿಕ ಹಾಗೂ ಆಧುನಿಕ ಕೃಷಿಯಲ್ಲಿನ ಗುಣ-ದೋಷಗಳನ್ನೂ ಕೃಷಿಕರಿಗೆ ತಿಳಿಸದೇ ಬರಿಯ ಸರ್ಕಾರವನ್ನು ದೋಷಿಯನ್ನಾಗಿಸುವ ಕೆಲವೊಂದು ಬುಜೀಗಳ ದೋರಣೆ ಸರಿಯೇ ಎಂಬುದು.
No comments:
Post a Comment