Saturday, May 16, 2015

ಬಾಳೆ ಮಹಾತ್ಮೆ

ಕೆಲವೊಮ್ಮೆ ನಮ್ಮ ಕನ್ನಡ ಭಾಷೆಯ ಬಗ್ಗೆ ಹೇಳುವಾಗ, ಬಾಳೆಹಣ್ಣಿನ ಉಪಮೆ ಬಳಸುವುದನ್ನು ಕೇಳಿದ್ದೆ. ಆದರೆ ಬಾಳೆಹಣ್ಣಿನ ಮಹಾತ್ಮೆ ಈಗೀಗ ಗೊತ್ತಾಗ್ತಾ ಇದೆ. ಏನೇ ಹೇಳಿ ಹಣ್ಣುಗಳಲ್ಲೇ ಬಾಳೆಯೇ ಶ್ರೇಷ್ಠ, ಭಗವಂತನಿಗೂ ಬಾಳೆಹಣ್ಣಿನ ನೈವೇದ್ಯವೇ ಬೇಕು ಅನ್ನುವುದರಲ್ಲೇ ಊಹಿಸಬಹುದು ಅದರ ಮಹಾತ್ಮೆ. ಬಾಳೆಯ ಸವಿಯನ್ನು ಅರಿತವನೇ ಧನ್ಯ ಎಂದು ನನ್ನ ಭಾವನೆ.

ಇದ್ಯಾಕಪ್ಪಾ ಎಲ್ಲಾ ಬಿಟ್ಟು ಬಾಳೆಯ ಬಗ್ಗೆ ಇಷ್ಟೊಂದು ಪ್ರೀತಿ ಹುಟ್ಟಿತು ನನಗೆ ಅಂತ ತಬ್ಬಿಬ್ಬಾಗಬೇಡಿ. ಅನೇಕ ತಿಂಗಳಿನಿಂದ ಅದೆಷ್ಟೋ ಬಗೆಯ ಹಣ್ಣುಗಳನ್ನು ತಂದು ತಿನ್ನುವ ಪ್ರಯತ್ನ ಮಾಡುತ್ತಿದ್ದೆ. ಮಿರಿ ಮಿಂಚುವ ತಹೆರೇವಾರಿ ಸೇಬುಗಳಿಂದ ಹಿಡಿದು, ಕಿತ್ತಳೆ, ದ್ರಾಕ್ಷಿ, ಮೂಸಂಬಿ ಇನ್ನೇನೋ ಹೆಸರೇ ಗೊತ್ತಿರದ ಹಣ್ಣುಗಳನ್ನೂ ಕೊಂಡು ತಂದೆ. ಆದರೆ ಅನೇಕಬಾರಿ ಯಾವ ಹಣ್ಣನ್ನು ಸರಿಯಾಗಿ ಆಸ್ವಾದಿಸಿ ತಿನ್ನಲು ಆಗಲೇ ಇಲ್ಲ. ನನ್ನ ಮೇಜಿನ ಮೇಲೆ ಅವುಗಳು ಹಾಳಾಗುವುದನ್ನು ನೋಡದೆ ಅನೇಕ ಬಾರಿ ತಿನ್ನಬೇಕಾಯಿತು. ಆದರೆ ಈ ಬಾಳೆಹಣ್ಣು ಇದೆಯಲ್ಲ ಅದು ಹಾಗಲ್ಲ, ನಾನು ಎಷ್ಟು ಬೇಡ ಬೇಡ ಅಂದರೂ ನನ್ನ ಬಾಯಿ ಹಾಗೋ ಕೈ ಗಳು ತಮ್ಮ ತಮ್ಮಲ್ಲಿ ಮಸಲತ್ತು ನಡೆಸಿ ಅದ್ಯಾವ ಮಾಯೆಯಲ್ಲೋ ಬಾಳೆಯೊಂದನ್ನು ಗುಳುಂ ಮಾಡಿದ್ದಿದೆ. ಅದೇನೇ ಇರಲಿ ನಿಜವಾಗಿಯೂ ಹಣ್ಣುಗಳ ರಾಜ ಎಂಬ ಪದವಿ ಬಾಳೆಹಣ್ಣಿಗೆ ದಕ್ಕಬೇಕಿತ್ತು. ಆದರೆ ಬಾಳೆ ಬಡವರ ಹಣ್ಣಾಗಿದ್ದರಿಂದ ಇತರೆ ಹಣ್ಣುಗಳು ಅದನ್ನು ತುಳಿದು ಹಾಕಿಬಿಟ್ಟವು ಎಂಬುದು ನನ್ನ ಅಭಿಪ್ರಾಯ. ನೀವೇ ಯೋಚಿಸಿ, ಬಾಳೆಯೊಂದನ್ನು ತಿನ್ನುವುದು ಅದೆಷ್ಟು ಸುಲಭ, ಒಂದೀಡಿ ಹಣ್ಣೊಂದನ್ನು ಚಿಟಿಕೆ ಹೊಡೆಯುವುದರಲ್ಲಿ ತಿಂದು ಮುಗಿಸಬಹುದು. ತಿನ್ನುವಾಗ ಆಗುವ ಆನಂದ ತಿಂದವನಿಗೇ ಗೊತ್ತು, ಆಹಾ ಅದೇನೋ ಸ್ವಾದ. ತಿಂದ ಮೇಲೆ ಅದೇನೋ ಒಂದು ತೃಪ್ತಿ. ಹಣ್ಣನ್ನು ತೊಳೆಯಬೇಕಿಲ್ಲ, ಸಿಪ್ಪೆ ಕಪ್ಪಾಗಿದೆಯಲ್ಲ ಎಂದು ಮರುಗಬೇಕಿಲ್ಲ. ಹೊರಗಡೆ ಹ್ಯಾಗಿದ್ದರೇನು ಒಳಗಿನ ತಿರುಳು ಮಾತ್ರ ಅದ್ಭುತ! ಆದರೆ ಬೇರೆ ಹಣ್ಣುಗಳದ್ದು ಹಾಗಲ್ಲ. ಕೆಲವೊಮ್ಮೆ ನೋಡಲಿಕ್ಕೆ ತುಂಬಾ ಚೆನ್ನಾಗಿರುವ ದ್ರಾಕ್ಷಿ, ಮಾವು ಒಳಗೆ ಹುಳಿಯಾಗಿರುವ ಸಂಭವವೇ ಹೆಚ್ಚು! ಇನ್ನೂ ಕಿತ್ತಳೆ-ಮೂಸಂಬಿಯ ವಿಚಾರ ಜಾಸ್ತಿ ಹೇಳುವ ಅವಶ್ಯಕತೆಯೇ ಇಲ್ಲ. ಆಮೇಲೆ ಹಲಸು, ಯಾರಾದರೂ ತೊಳೆ ತೆಗೆದುಕೊಟ್ಟರೆ ತಿನ್ನಬಹುದು. ಆಮೇಲೆ ಪರಂಗಿ/ಪಪ್ಪಾಯ, ಕರಭೂಜ ತಿನ್ನಲು ವಿಶೇಷ ತಯಾರಿ ಮಾಡ್ಕೊಬೇಕು. ಇಷ್ಟೆಲ್ಲಾ ಗುಣಗಳಿರೋ ಬಾಳೆಹಣ್ಣನ್ನು ಯಾಕೆ ನಾವು ಹಣ್ಣುಗಳ ರಾಜ ಅನ್ನಬಾರದು ಅಂತಾ? ಇನ್ನೊಂದು ಬಹು ಮುಖ್ಯವಾದ್ದು ಮರ್ತೆ ಬಿಟ್ಟೆ, ಬಾಳೆಹಣ್ಣು ಜಾಸ್ತಿ ಹಣ್ಣಾಗಿ ಹೋಗಿಬಿಟ್ಟಿದೆ ಅಂತ ಮರುಗಬೇಕಾಗಿಯೂ ಇಲ್ಲ ಮತ್ತೆ ನೂರಕ್ಕೆ ೯೦ರಷ್ಟು ಬಾರಿ ನಮಗೆ ಭ್ರಮನಿರಸನ ಗೊಳಿಸುವುದಿಲ್ಲ!! ಅಲ್ವೇ??

ಬಾಳೆಹಣ್ಣಿನ ಬಗ್ಗೆ ಇಷ್ಟೆಲ್ಲಾ ಹೆಮ್ಮೆ ಪಟ್ಟ ನನಗೆ ಹಾಗೆ ಒಂದು ಬಾರಿ ಅದರ ಬಗ್ಗೆ ಆಳವಾಗಿ ತಿಳಿದುಕೊಳ್ಳುವ ಮನಸಾಗಿ, ವಿಕಿಪೀಡಿಯ ತೆರೆದೆ. ಹಾಗೇ ನೋಡುತ್ತಾ ಇರುವಾಗ ಒಂದು ವಿಷಯ ಗಮನಿಸಿದೆ, ಇಡೀ ವಿಶ್ವದ ೧೮ ಪ್ರತಿಶತವನ್ನು ನಮ್ಮ ದೇಶದಲ್ಲಿ ಬೆಳೆಯುತ್ತಾರಂತೆ ಆದರೆ, ನಮ್ಮ ರಪ್ತು ಪ್ರಮಾಣ ನಗಣ್ಯ. ಅದೇ ರೀತಿ, ಜಗತ್ತಿನ ಬರಿಯ ೫ ಪ್ರತಿಶತ ಉತ್ಪಾದನಾ ಪಾಲನ್ನು ಹೊಂದಿರುವ ಇಕ್ವೆಡಾರ್ ರಪ್ತಿನ ವಿಷಯಕ್ಕೆ ಬಂದಾಗ ಮೊದಲ ಸ್ಥಾನದಲ್ಲಿ ಇದೆ. ಅದು ತನ್ನ ಉತ್ಪಾದನೆಯ ೭೦ ಪ್ರತಿಶತವನ್ನು ಇತರೆ ದೇಶಗಳಿಗೆ ರಪ್ತು ಮಾಡುತ್ತದಂತೆ (೨೦೧೨ ರ ದತ್ತಾಂಶ). ಇದರಲ್ಲೇ ಗೊತ್ತಾಗುತ್ತೆ ನಾವು ಕೃಷಿ ಮಾರುಕಟ್ಟೆಯನ್ನು ಅದೆಷ್ಟು ಕಡೆಗಣಿಸಿದ್ದೇವೆ ಎಂದು. ನಮ್ಮ ಭಾರತ ವಿಶ್ವಗುರುವಾಗಬೇಕಾದರೆ ಕೃಷಿ ಮಾರುಕಟ್ಟೆಯೊಂದೇ ಸಾಕು. ನಾವು ಏನೇನು ಬೆಳೆಯೋಲ್ಲ! ನಮಗೆ ನಮ್ಮ ಸಾಮರ್ಥ್ಯ ತಿಳಿದಿಲ್ಲ. ವಿಶ್ವದ ಅನೇಕ ರಾಷ್ಟ್ರಗಳು, ಮಾನವ ಸಂಪನ್ಮೂಲ ಇಲ್ಲವೇ ಕೃಷಿಗೆ ಯೋಗ್ಯ ವಾತಾವರಣ ಇಲ್ಲದೆ ಪರಿತಪಿಸುತ್ತಾ ಇರುವಾಗ ಈ ಎರಡು ವಿಪುಲವಾಗಿ ಇರುವ ನಾವು ಬಹುಮುಖ್ಯ ಕ್ಷೇತ್ರವೊಂದನ್ನು ಕಡೆಗಣಿಸಿದ್ದೆವೆಯೇ???

No comments:

Post a Comment